ಕಣ್ಣಾಯಿಸಿದವರು

Sunday, 18 November 2018

ಅವನು ಹೊರಟಿದ್ದ...

ತೋಚಿದ್ದ ಗೀಚಿದ್ದು

ಸಂಭವ:

ಮುಂಜಾವಿನ ಬೆಳಕು ಪಸರಿಸುತ್ತಾ ಸರಿಯುತ್ತಿದ್ದಂತೆ ರಶ್ಮಿಯ ಬೆನ್ನೇರಿ ಆತ ಎತ್ತ ಕಡೆಯೋ ಹೊರಟಂತಿದೆ. ಅವ ಹೊರಟ ರವಿಯ  ಹುಡುಕುತ್ತಾ ಬೆಳಕು ಚೆಲ್ಲಿದ ದಿಕ್ಕಿನಲ್ಲಿ. ಅನುಭವದ ಖನಿಜ ಹೊತ್ತ ಆದ್ಮಿಯಂತೆ ಇರಲಿಲ್ಲ ವರ್ಚಸ್ಸು. ಕೆಲ ದಿನಗಳಿಂದ ಅಲ್ಪ ಬಳಲಿದ್ದಂತಿತ್ತು. ಜೀವನದ ಎಲ್ಲೆ ಮೀರಿ ಸಾಗುವ ಮಾಹತ್ವಾಕಾಂಕ್ಷೆ ಅವನಲ್ಲಿದ್ದುದು ಈಗ ಕೊಂಚ ಬಣ್ಣ ಮಾಸಿದಂತಿತ್ತು. ಅದರೆ ಅಷ್ಟಕ್ಕೂ ಅವನ ಬದುಕು ನಶ್ವರ ಎನಿಸುವಂತೆ ಮೂಡುವ ಯಾವ ಪಾಠ ಕಲಿತಿದ್ದ ಎಂಬುದು ಅವನಿಗೇ ಗೊತ್ತಿತ್ತೋ ಇಲ್ಲವೋ...
ಒಮ್ಮೊಮ್ಮೆ  ಕೇಳಿದಂತಿತ್ತು "ಸಾವು" ಎಂದು ಆಗಾಗ ಗುನುಗುತ್ತಿದ್ದುದು. ಕಾಲ ಪ್ರಕ್ಷುಬ್ಧ ಅವನ‌ ಅಣತಿಗೆ ಕಾಯುತ್ತಿತ್ತೊ ಏನೋ.. ಸ್ನಿಗ್ಧ ಚೆಲುವೆಯ ನಗ್ನ ಕನವರಿಕೆಗಳು ಅವನ ಭಾಧಿಸುತ್ತಿದ್ದುದು ಅಪರೂಪವೇ ಅಲ್ಲ ಶೂನ್ಯವೇ ಸರಿ.

ಇಂದು ಬೆಳಿಗ್ಗೆಯಾದರೂ ಏನದು ಕಾರಣವೋ ಅತ್ತ ಚಿಂತಾಮಗ್ನನಾಗಿಯೂ ಕಾಣಲಿಲ್ಲ ಇತ್ತ ಉಲ್ಲಾಸದ ನಗೆಯೂ ಬೀರಲಿಲ್ಲ. ಎಂದೂ ನೋಡದವನ ಹಾಗೆ ಅದೇ ಹಳೆ ಹರಕು ವಸ್ತ್ರ ತೊಟ್ಟು ಬೆಳ್ಳಂಬೆಳಗ್ಗೆ ಎದ್ದು ಮುಖವೂ ತೊಳೆಯದೇ ಹೊರಟೇ ಬಿಟ್ಟಿದ್ದ.. ಹೊಸ ಗಮ್ಯದ ಕಡೆಗೋ ಅಥವಾ ಗುರುತಿಲ್ಲದ, ಗೌಜಿಲ್ಲದ ಸೌಗಂಧವ ಅರಸುತ್ತಲೋ ಎತ್ತಣವೋ  ಕಿರಣಗಳ ದಿಕ್ಕಿನಲ್ಲಿ ಸಾಗುವ ಅವನ ಮನೋಕಾಮನೆ ಹಾಗೇ ಒಮ್ಮೆ ಗೌತಮನ ನೆನಪು ತರಿಸಹತ್ತಿತ್ತು. ಚೂರೇ ಚೂರು ಆತ ಬದುಕು ಬದಲಿಸಬಹುದಿತ್ತೇನೋ ಸ್ವಲ್ಪ ಆಸುಪಾಸು ತಿರುಗಿ ನೋಡಿದ್ದಿದ್ದರೆ..
ಅಂದು ಅದೇನಾಗಿತ್ತೋ ತಿಳಿಯಲೊಲ್ಲದು ಕಾಡು ಮೌನದ ದೀಕ್ಷೆ ಪಡೆದಿತ್ತಿರಬೇಕು. ದಿನವೂ ಮುಗಿಲ ಮುಟ್ಟುವಂತೆ ಧ್ವನಿಸುತ್ತಿದ್ದ ಕಾಗೆ ಗುಬ್ಬಿಗಳು ತಮ್ಮ ದನಿಗೆ ಬೀಗ ಜಡಿದಿದ್ದವಿರಬೇಕು..

ಸುತ್ತ ಸತ್ತ ಸುದ್ದಿ ಆವರಿಸಿರುವ ಛಾಯೆ ಅದೇಕೋ ಗೊತ್ತಿಲ್ಲ ಮೋಡ ಗಳ ಮರೆಯಿಂದ ಸೂರ್ಯ ಕಿರಣಗಳನ್ನು ಇನ್ನೂ ಪ್ರಖರಿಸುವ ಕಾರ್ಯದಲ್ಲಿ ತನ್ಮಯನಾಗಿದ್ದ.  ಅಷ್ಟೇ ಅವ ಹೊರಟ ಸುಳಿವು ಮತ್ಯಾರಿಗೂ ಸಿಗಲೇ ಇಲ್ಲವಲ್ಲ. ಅವ ತನ್ನ ಕಾರ್ಯಗಳನ್ನು ಅಲ್ಲಿಗೇ ಸಮಾಪ್ತಿಗೊಳಿಸಿದ್ದನೋ ಅಥವಾ ಯಾವುದೋ ಮಹತ್ಕಾರ್ಯಕ್ಕೆ ಅದು ಮುನ್ಸೂಚಿಯಾಗಿತ್ತೋ ಅರಿಯುವುದು ಸ್ವಲ್ಪ  ಕ್ಲಿಷ್ಟಕರವಾದುದೇ.. ಮತ್ತಿನ್ನೇನೋ ಬಿಟ್ಟು ಹೊರಟಿದ್ದರೆ ಬರುವನೆಂದು ಸಂಜೆ ತನಕ ಕಾದಿದ್ದೇ ಬಂತು. ಆದರೆ ಅವ ಬರಲಿಲ್ಲ ಅವನಿಗೆ ಈ ಬದುಕು-ಸಾವು 'ಕಾಲ' ಎಂಬುದರ ಪರಿವೆಯೇ ಇರಲಿಲ್ಲ. ಅವ ಹೊರಟಿದ್ದು ಕಾರ್ಮೋಡದ ಕತ್ತಲ ಭೇದಿಸುವ ದಿಶೆಯಲ್ಲಿರಬೇಕು. ಕಾಡು ಕರೆಯುತ್ತಿತ್ತು ಅವನನ್ನು.. ಮತ್ತೆ ಮರಳಿ ನೆನಹುಗಳಿಗೆ ಮರುಕಳಿಸುವ ಅವನ ಆಲೋಚನೆಗೆ ಅಸ್ತು ಎನ್ನುವ ಭಾವ ಬಿಂಬಿಸುವ ಚಿಕ್ಕ ಕುರುಹು ಆ ದಿಶೆಯಲ್ಲಿಯೇ ನಿಧಾನವಾಗಿ ಜುಳು ಜುಳು ಎಂದು ದನಿಸುತ್ತಾ ಧ್ಯಾನಿಸುತ್ತಿದ್ದಂತಿತ್ತು. ಬೆವರು ಹರಿದಷ್ಟು ಸ್ತಬ್ಧ ನದಿ ತನ್ನ ಬಸಿರ ತುಂಬಿಸಿಕೊಳ್ಳುತ್ತಿತ್ತು.
ಅವನು ಹೊರಟಿದ್ದಷ್ಟೇ ಆಗ ಮತ್ತೆ ಹಿಂದಿರುಗಿದ್ದು ನೋಡಲಿಲ್ಲ. ನದಿ ಹರಿಸಿದ ನೀರು ,ರವಿ ಸೂಸಿದ ರಶ್ಮಿ , ಸುಪ್ತ ಸುಂದರಿಯ ಸಪ್ತ ಆಲೋಚನೆಗಳಂತೆ ಅವನನ್ನು  ವಿಲೀನಿಸಿದ್ದವು.

--ರತೀಶ್ ಹೆಬ್ಬಾರ್

Tuesday, 13 November 2018

ಬೆಳಕು ೨೦೧೮

ತೋಚಿದ್ದ ಗೀಚಿದ್ದು...
 ದಸರಾ ೨೦೧೮

ದೀಪಾವಳಿ ೨೦೧೮
ಬೆಳಕು ಬೆಳಕು..
ಹೆಚ್ಚು ಹೊತ್ತು ಹಸಿಯಾಗಿರದಿದ್ದರೂ
ಇದ್ದಷ್ಟೇ ಹೊಸತು..
ದೀನ ನಯನಗಳು ದಣಿವಂತೆ
ದುನಿಯಾಗುಂಟ ಹಾಸಿತು

ಕೆಂಪು ಕೇಸರಿ ಹಸಿರ ಹೊದಿಕೆ
ರಾಚುವಂತ ರಂಗು
ಅಲ್ಲೆಲ್ಲೋ ಬಿಳಿಯ ಬಳಿಯುವ
ತವಕ ನಡುವೆಲ್ಲಾದರೂ ಕಂಡೀತೋ
ಎಂಬ ತುಡಿತ
ಚದುರುವ ರಿಂಗುರಿಂಗು ರಂಗಿನ ರಂಗ
ಅರೆಕ್ಷಣವಷ್ಟೇ ಮತ್ತೆ ಅದೇ ರೇಸಿಗೆಯ ರೋಗ..
ರೂಪರಾಧೆಯ ಕರೆಯ ರಾಗ..

 ಕೆಂಪು ಕಾಣದ ಕಲಾ ಕುಸುರಿ
ಮೈ ಮನದ ರೂಪ ರೂವಾರಿ
ಮತ್ತೆ ಮಾತು ಮಾಯಾ ಲಹರಿ
ಚೆಲುವ ಬೆಳಕು ಬಣ್ಣದ ಬುಗುರಿ


--ರತೀಶ್ ಹೆಬ್ಬಾರ್(ಬರ್ಯಾಣ-೬)

baryaana.blogspot.in

ನಗುತ್ತೇವೆ ಒಮ್ಮೆ

ತೋಚಿದ್ದ ಗೀಚಿದ್ದು...

ನಗುತ್ತೇವೆ ನಾವೂ ಕೂಡ

ಎಷ್ಟು ದಿನಕ್ಕೆ ಆ ಕೋಪ
ದೂರ ಸರಿದಂತೆ ಬೆಳೆಯುವುದು
ಮಂಜುಗಡ್ಡೆ ಘನೀಕರಿಸುತ್ತಾ
ನೀರಾವಿಯಾಗಿ ದೂರಾಗಬೇಕು
ಆ ರವಿಯ ಮೋಹಕ ರಶ್ಮಿಗೆ

ಮುನಿಸು ಮಸಿಯಾಗುವುದು
ಕಪ್ಪು ಛಾಯೆ ಹರಡುವುದು
ಇದ್ದಿಲು ಉರಿದಂತೆಲ್ಲ
ಬೆಳಕು ಕ್ಷೀಣವಷ್ಟೇ
ಕರಿ ನೆರಳ ಸೂಸುವ ಬತ್ತಿಯಡಿ

ಮರೆಯುವಂತೆಲ್ಲ ಮರೆತುಬಿಡು
ಅನವಶ್ಯಕ ಕಂತೆಗಳ ಕಾದಾಟ
ಮತ್ತೆಂದೂ ನೆನಪಿಸುವುದು
ತರವಲ್ಲ ಗತಿಸಿದ ಘಟನೆಗಳು
ಗೋಳು ಹೊಯ್ದುಕೊಂಡಿದ್ದು
ಸಾಕು ನಾನೂ ಒಮ್ಮೆ ನಗುತ್ತೇನೆ..

ಬಲಿತು ಬೆಂಡಾದದ್ದು ಬವಣೆ ಬದುಕಿಗೆ
ಬೇಸತ್ತು ಬರಡಾಗುವುದು ಬರದ ಬದುಕಿಗೆ
ಬೆಂಕಿ ಭವಿಷ್ಯ ಸುಡುವಲ್ಲಿ ಬೆವರು ಬಳಿಯುವುದು
ಬಣ್ಣ ಬಣ್ಣದ ಬೂತ ಬೆಳಕ ಹರಿಸುವುದ ಬಿಟ್ಟು
ಬೆಂಕಿ ಹಚ್ಚಿದರೆ ಬೆಂಗಾವಲಿಗೆ ಬಾರರು ಬಂಧುಗಳು
ಬದುಕು ಬದಲಿಸರು....

--ರತೀಶ್ ಹೆಬ್ಬಾರ್  (ಬರ್ಯಾಣ-೫)

ಎಕ್ಸಾಮ್ ಟೆನ್ಸನ್

ತೋಚಿದ್ದ ಗೀಚಿದ್ದು

You missed ಎನ್ನುವ
ಮುಂಜಾವಿನ ಅಲಾರಾಮುಗಳು
ಎದ್ದೇಳಿಸಲೆಂದೇ ರಿಂಗಾಗುವ
ರೆಹಮಾನನ ಮ್ಯೂಸಿಕ್ಕು
ಅಮ್ಮನ ಅನಪೇಕ್ಷಿತ ಅನಿಯಮಿತ ಕರೆಗಳು
ಎಂದೂ ಬಾರಿಸದ ಗುಡಿಯ ಗಂಟೆಯ
ಡಂ ಡಂ ಸೌಂಡು

ಸಿನಿಮಾದಲ್ಲಷ್ಟೇ ನೋಡಿದ
ಹಕ್ಕಿ ಚಿಲಿಪಿಲಿ
ಆಗತಾನೆ ಬೆಳ್ಳಿ ಕವಚ ಒಡೆದು
ಹೊರಬಂದ ಕೋಳಿಮರಿ

ಬುಟ್ಟೋಗ್ಬೇಡಾ ಎಂದು ಗೋಗರೆವ
ಸ್ಲೀಪ್ ವೆಲ್ ಬೆಡ್ಡು
ರಾತ್ರಿ ನೋಡಿದ ಗಣೇಶ್ ಸಿನಿಮಾ ಗುಂಗು
ಅಪೂರ್ಣ ಬೆಳಗುಗನಸು

ಆರು ವರ್ಷದಲ್ಲಿ ಎಂದೂ ಬದಲಿಸದ
ಫೋನ್ ನಂಬರು
ಕಾಯುತ್ತಿದ್ದದ್ದು ಮಾತ್ರ ಎಂದೂ ಬಾರದ
ಆಕೆಯ ಕರೆಗಳಿಗೆ

ಇಷ್ಟೇ ಮತ್ತೆ ಆಗಷ್ಟೇ ಭೂಮಿಗೆ ಬಿದ್ದ
ಹಸುಗೂಸಿನಂತೆ ಎಲ್ಲೋ ಅಡಗಿದ್ದ
ಸಿಲಬಸ್ಸು  ಮತ್ತೆ ಮೇಜಿಗೆ ಬಂದು  ಅಳುವುದು
ತುಂಡು ಬ್ರೆಡ್ಡು ಜಾಮ್ ಸವರಿ
ಹೊಟ್ಟೆ ಒಳ ಸೇರುವುದರೊಳಗೆ
ನಾಲ್ಕು ಪ್ರಶ್ನೆಗೆ ಉತ್ತರ ಕಲಿಯತಕ್ಕದ್ದು...

--ರತೀಶ್ ಹೆಬ್ಬಾರ್ (ಬರ್ಯಾಣ-೪)


ಸದ್ಯದ ಬರ್ಯಾಣ

DEJA-VU

ಕಾನೂರಿನಲ್ಲಿ ಇಂತಾ ಫಟಿಂಗರ ಸಂಖ್ಯೆ ತುಂಬಾ ಏನಿಲ್ಲ‌. ವೆಂಕಣ್ಣ ಅಂತ ಮಹಾಫಟಿಂಗರ ಸಾಲಿಗಂತೂ ಸೇರಿಸೋದಕ್ಕೆ ಲಾಯಕ್ಕಿಲ್ಲ. ಅವನ ಕರಾಮತ್ತು ಹೇಳಿಕೊಳ್ಳುವಂತ ಘನಾಂದಾರಿದು ಅ...

ಟಾಪ್ ಓದಾಣ