ಕಣ್ಣಾಯಿಸಿದವರು

Saturday, 12 September 2020

DEJA-VU

ಕಾನೂರಿನಲ್ಲಿ ಇಂತಾ ಫಟಿಂಗರ ಸಂಖ್ಯೆ ತುಂಬಾ ಏನಿಲ್ಲ‌. ವೆಂಕಣ್ಣ ಅಂತ ಮಹಾಫಟಿಂಗರ ಸಾಲಿಗಂತೂ ಸೇರಿಸೋದಕ್ಕೆ ಲಾಯಕ್ಕಿಲ್ಲ. ಅವನ ಕರಾಮತ್ತು ಹೇಳಿಕೊಳ್ಳುವಂತ ಘನಾಂದಾರಿದು ಅಂತ ನನಗಂತೂ ಅನಿಸುದಿಲ್ಲ. ಆದ್ರೆ ಕತೆಯಾಗ್ಬೇಕು ನೋಡಿ. ವೆಂಕಣ್ಣ ಹಲ್ಕಾ ಬಡ್ಡಿಮಗ ಯಾಕಾದ ಅನ್ನೋದು ಮಾತ್ರ ನಾವು ನೀವು ಕಲ್ಪನೆ ಮಾಡ್ಕಳುವಷ್ಟು ಸಸಾರದ್ದಲ್ಲ. ವೆಂಕಣ್ಣಂಗೆ ಈಗ ಸುಮಾರು ಐವತ್ತೈದರ ಆಸುಪಾಸು ಇರಬಹುದು. ನೋಡ್ಲಿಕ್ಕೆ ಹಾಂಗೆ ಕಾಣುದಿಲ್ಲ ಮತ್ತೆ.. 'ಅವ ಸ್ನಾನ ಮಾಡಿ 'ರಾಪು' ಮಾಡಿಕೊಳ್ಳೋದ ನೋಡ್ಬೇಕು' ಅಂತ ಊರ ಹೆಂಗಸರೆಲ್ಲ ಮಾತಾಡಿಕೊಳ್ತಾರೆ..

ಅಂದಾಜು ಮಾಡಿದ್ರಿ ಅಂತಾಯ್ತು.. ವೆಂಕಣ್ಣ ಭಾಳ ನೀಟಾದ ಮನುಷ್ಯ ಅಂತೂ ಹೌದು. ಸಂಡಾಸಿಗೆ ಅರ್ಧ ಗಂಟೆ ಮೀಯುದಕ್ಕೆ ಮುಕ್ಕಾಲು ಗಂಟೆ ಇಷ್ಟಾದಮೇಲೆ ಕನ್ನಡಿ ಮುಂದೆ ನಿಂತ್ಕೊಂಡು ತಲೆ ಬಾಚಿದಂಗೆ ಸಿಗೋ ಒಂದೊಂದೇ ಬೆಳಿಕೂದಲನ್ನ ಕಿತ್ತು ತೆಗೆದರೂ ಅವನ ತಲೆ ಇನ್ನೂ ಅರ್ಧ ಕಾಲಿ ಆಗದೇ ಇನ್ನರ್ಧ ಉಳಿದುಕೊಂಡಿದೆ ಅನ್ನೋದು ವಾಪಸ್ ಬರೋದಕ್ಕಿರೋ ವಿನಾಯಕನಿಗೆ ಅಪ್ಪನ ಗುರುತು ಸಿಗದಂತಾಗದಿರಲಿ ಎಂದಂತೆ. ಇದನ್ನ ನಾನೇನು ಹೇಳುದಿಲ್ಲ .. ಅವನೇ ಯಾವಾಗಲಾದ್ರೂ ಯಲ್ಲಾಪುರದ ಕಡೆಗೆ ಹೋದರೆ ಹಜಾಮನತ್ರ ಹೋಗಿ ತಲೆಗೆಲ್ಲ ಕಪ್ಪು ಬಣ್ಣ ಹಚ್ಚಿ ಮೂವತ್ತರ ಹುಡುಗನಂತೆ ಮಾಡಿಕೊಂಡು ಬರುವಾಗ ದಾರಿಲಿ ಸಿಕ್ಕಿ ಮದುವೆ ನಿನಗೋ ಅಥವಾ ನಿನ್ನ ಮಗನಿಗೋ ಅಂತ ಕೇಳಿದರೆ "ನನ್ನ ಮಾಣಿ ಬೆಂಗಳೂರಿಗೆ ಹೋಗಿ ನಾಲ್ಕೈದ್ ವರ್ಷಕ್ಕೆ ಬಂತ್ರ.. ವಾಪಸ್ ಬಂದ್ರೆ ಇವನೇ ನನ್ನಪ್ಪ ಅಂತ ಹೇಳುದಕ್ಕೆ ಅವಂಗೆ ಆಯಿ ಇಲ್ಲೆ ನೋಡಿ. ಅದ್ಕೇ ಅವ ಹೋಗಕಿದ್ರೆ ಹೆಂಗಿದ್ನೋ ಹಂಗೇ ಇರವಲ್ದ..?" ಎಂದು ಕೇಳ್ತಾನೆ ಪುಣ್ಯಾತ್ಮ. ಹೋಗಲಿ ಪಾಪ! ಹೆಂಡತಿ ಗಿರಿಜೆ ಬಾಳ ಬೇಗ ಇವನನ್ನ ಬಿಟ್ಟು ಹೋದಳು. ಮಾಣಿ ವಿನಾಯಕ ಇನ್ನೂ ಸಣ್ಣವ ಇದ್ದ. ಮೂರೋ ನಾಲಕ್ಕೋ ವರ್ಷದವನಾಗಿದ್ದ ಅಷ್ಟೇ. ಮತ್ತೆ ಮದುವೇ ಆಗೋದಕ್ಕೂ ವೆಂಕಣ್ಣ ತಯಾರಾಗಲಿಲ್ಲ ಅನ್ನೋದು ಈಗ ಅವನಿಗೆ ಹೆಮ್ಮೆ ಅನಿಸಿದರೂ ಅವನಂತ ಅಂಡಪಿರ್ಕಿಗೆ ಒಂದು ಹೆಣ್ಣು ಕೊಟ್ಟಿದ್ದೇ ಹೆಚ್ಚು, ಎರಡನೇ ಮದ್ವೆಗೆ ಹೆಣ್ಣು ಕೊಡೋ ತಂದೆ ಈ ಭೂಮಿ ಮ್ಯಾಲೆ ಇಲ್ಲೆ ಎಂದು ಇಪ್ಪತ್ತು ವರ್ಷದ ಹಿಂದೇ ಅಕ್ಕಪಕ್ಕದವರು ಆಡಿಕೊಳ್ತಿದ್ದರು. ಗಿರಿಜೆ ಸತ್ತದ್ದು ಮಾತ್ರ ಪಾಪ ಅದೇನಾಗಿತ್ತೋ ಕೊನೆಗೂ ಗೊತ್ತಾಗಲಿಲ್ಲ. ಒಂದು ತಿಂಗಳಿಂದ ಹೊಟ್ಟೆನೋವು ಅಂತಿದ್ದಳಂತೆ. ವೆಂಕಣ್ಣ ಹೇಳಿದ್ದೇ ಕರೆ. "ಆಸ್ಪತ್ರೆಗಾದ್ರೂ ತಗಂಡೋಗ್ರೋ.. ನಾ ಈ ಮನೆಲಿ ಸಾಯ್ತ್ನಿಲ್ಲೆ. ಪ್ರಧಾನಬಾಗಿಲ ಹೊರ್ಗಾದ್ರೂ ಮನಗಿಸ್ರೋ " ಗೋಳೋ ಅಂತ ಕೋಣೆ ಒಳಗಿಂದ ಕೂಗೋದು ಅಂಗಳದಿಂದ ಓಡಾಡುವಾಗ ಕೇಳ್ತ್ತಿತ್ತು ಎಂದು ಆಳುಕಾಳುಗಳು ಹೇಳುತ್ತಿದ್ದರು. ಹೊಟ್ಟೆನೋವು ಎಂದು ಕಷಾಯ ಕುಡಿತಿದ್ದೆ ಅಂದಿದ್ದಳಂತೆ. ಜಾಸ್ತಿ ದಿನ ಉಳಿಯಲಿಲ್ಲ. 'ಅದೇನು ಗೆಡ್ಡೆ ಬೆಳೆದಿತ್ತೋ ಏನೋ ಆಪರೇಷನ್ ಆದ್ರೂ ಮಾಡಿದ್ರೆ ಬದುಕ್ತಿತ್ತೇನೋ ಪಾಪ ಗಿರಿಜಮ್ಮನೋರು' ಅಂದು ತಿಮ್ಮು ಆಗಾಗ ವೆಂಕಣ್ಣನನ್ನು ಕಂಡಾಗೆಲ್ಲ ಗಿರಿಜೆಯನ್ನು ನೆನೆದು ಬಣಬಣಿಸುತ್ತಾಳೆ.

ಗಿರಿಜೆ ಸಾಯೋದಕ್ಕೆ ಎರಡು ದಿನ ಮೊದಲು ವೆಂಕಣ್ಣ ಅಡಿಕೆ ಕೊಟ್ಟು ಬರುತ್ತೇನೆಂದು ಮನೆಯಲ್ಲಿ ಅದೇ ಕೆಲಸದಾಳು ಪಾಯ್ಕು ಇದ್ದಾನಲ್ಲ ಅವನ ಹೆಂಡ್ತಿ ತಿಮ್ಮು ಇದ್ದಾಳಲ್ಲ. ಅವಳತ್ರ ಮನೆಕಡೆಗೆಲ್ಲ ನೋಡ್ಕ ಅಂತ ಹೇಳಿ ಯಲ್ಲಾಪುರಕ್ಕೆ ವಕಾರಿಗೆ ಹೋದವ ಸಂಜೆಯಾದರೂ ಬರಲೇ ಇಲ್ಲ. ಖಾನವಳಿಯಲ್ಲಿ ಉಳಿದಿದ್ದ ಅನ್ನುವ ವಿಚಾರ ಆಮೇಲೆ ವಿನಾಯಕನಿಂದ ಗೊತ್ತಾದರೂ ಅವನು ಬರದೇ ಗಿರಿಜೆಗೆ ಅನ್ನ ಬೇಯಿಸಿ ಹಾಕುವವರಾದ್ರೂ ಯಾರು ಹೇಳಿ.‌?
ತಿಮ್ಮು ಸಂಜೆಯ ಹೊತ್ತಿಗೆ ಕೊಟ್ಟಿಗೆಲಿದ್ದ ಒಂದು ಬರಡು ದನಕ್ಕೆ ಹುಲ್ಲು ಕಲಗಚ್ಚು ಕುಡಿಸಿ 'ಮನೆಗೆ ಹೋವ್ತೆ ಬಡ್ತೇರೆ ನೋಡ್ಕಳಿ ಮತ್ತೆ.. ಜೋಪಾನ' ಎಂದು ಹೇಳಿ ಹೋದವಳು ಪಾಯ್ಕು ಮನೆಗೆ ಬರಲಿಲ್ಲ ಅಂತ ಒಬ್ಬನೇ ತನ್ನ ಕೂಸೊಂದಿಗೆ ಹಟ್ಟಿಯಲ್ಲಿ ಮಲಗಲು ಹೆದರಿಕೆಯಾಗಿ ಅವಳನ್ನೂ ಹೊತ್ತುಕೊಂಡು ರಾತ್ರೆ ಎಂಟರ ಹೊತ್ತಿಗೆ ವಾಪಸ್ಸು ವೆಂಕಣ್ಣನ ಮನೆಗೇ ಬಂದಳಂತೆ. ಇಷ್ಟು ಹೊತ್ತಾದರೂ ಮನೆಯಲ್ಲಿ ಬೆಳಕು ಹಚ್ಚಿಲ್ಲ, ಬಾಗಿಲು ದೀಪ ಹೊತ್ತಿಸಿಲ್ಲದ್ದರಿಂದ ಕಾನೂರಿಗೆ ಬರುವ ಕೊನೆಯ ಗಾಡಿಗೂ ವೆಂಕಣ್ಣಯ್ನೋರು ಬಂದಿಲ್ಲ ಎಂಬುದು ಅವಳಿಗೆ ಖಾತರಿಯಾಗಿ ತಾನು ಬಂದದ್ದು ಭಾಳ ಒಳ್ಳೆದಾಯಿತೆಂದು ಹೊರ ಜಗುಲಿಯಿಂದಲೇ ಕೂಗಿ ಕರೆದಳು,
"ಗಿರಿಜಮ್ಮೋರೆ, ಹೋಯ್..."
ಗಿರಿಜೆ ಇನ್ನು ಎದ್ದು ಬರುವಷ್ಟಿರಲಿಲ್ಲ. ಕೋಣೆಯೊಳಗಿಂದ ಮಲಗಿದ್ದ ಮಂಚದಿಂದಲೇ ಆದಷ್ಟು ಧ್ವನಿಯೆತ್ತರಿಸಿ "ಅವರು ಇನ್ನೂ ಬೈಂದ್ವಿಲ್ಲೇ ಅಂತ ಕಾಣ್ತು ತಿಮ್ಮು, ನೀನೇ ಒಂದು ಲೋಟ ಗಂಜಿನಾದ್ರೂ ಬೇಯ್ಸಾಕ್ತ್ಯ ಮಾತ್ರ.. ನೀ ಊಟ ಮಾಡ್ಕ ಬಂದ್ಯ ಇಲ್ಯ..?" ಎನ್ನುತ್ತಲೇ ತಕ್ಷಣ ಏದುಸಿರಿನಿಂದ ಬರುವುದರಲ್ಲಿದ್ದ ಕೆಮ್ಮನ್ನು ತಡೆಹಿಡಿದುಕೊಂಡಳು.
ತಿಮ್ಮು ಗಿರಿಜಮ್ಮನವರ ಧ್ವನಿ ಕೇಳಿಯೆ ಅವರ ಪರಿಸ್ಥಿತಿ ಅಂದಾಜಿಸಿದವಳು ಆದರೂ ಕೊಂಚ ಹಿಂಜರಿಕೆ ಮತ್ತು ಅನುಮಾನದಿಂದ ಕೇಳಿದಳು " ಅಮ್ಮನೋರೆ ಏನು ಹೇಳ್ತಾ ಇದ್ದೀರ ನೀವು? ನಾನು ಗಂಜಿ ಮಾಡಿಹಾಕಿದ್ರೆ ನೀವು ಮುಟ್ತೀರ? ಬ್ಯಾಡ ಬ್ಯಾಡ ಶಾರದಕ್ಕನ ಮನೆಗೆ ಹೋಗಿ ಅವ್ವಾವ್ರನ್ನ ಇಲ್ಲ ಸಾವಿತ್ರಕ್ಕ‌ನ ಕರ್ಕಂಡು ಬರ್ತೀನಿ ಇರಿ.." ಅನ್ನುವಾಗಲೇ ಗಿರಿಜೆ ಮತ್ತಷ್ಟು ಕೆಮ್ಮುತ್ತಾ ಹೆಣಗಾಡುತ್ತ ಎದ್ದು ಜಗುಲಿಯ ಬಳಿ ಬಂದು ಲೈಟು ಹಚ್ಚಿ ಗೋಡಗೊರಗಿ ಕುಸಿದು ಬಿದ್ದಳು. ಅದನ್ನು ಕಂಡದ್ದೇ ತಡ ತಿಮ್ಮು ಹಿಂದೆ ಮುಂದೆ ನೋಡದೆ ಒಳಗೆ ನುಗ್ಗಿ ಅವರನ್ನು ಕೈಗಳಿಂದ ಹಿಡಿದು ಹಣೆ ತಟ್ಟಿ ನಿಧಾನಕ್ಕೆ ಎಚ್ಚರ ತಪ್ಪದಂತೆ ಮಾತಾಡಿಸುತ್ತ ಮರಳಿ ಮಂಚವಿರುವ ಕೋಣೆಗೆ ಕರೆದುಕೊಂಡು ಹೋಗಿ ಮಲಗಿಸಿದಳು‌. ಸುಧಾರಿಸಿಕೊಳ್ಳುತ್ತಿದ್ದ ಗಿರಿಜೆ ' ಆಗ್ತ್ಲೆ ತಿಮ್ಮು ಇನ್ನಾಗ್ತ್ಲೆ ನನ್ನತ್ರ. ನೀ ಗಂಜಿ ಬೇಯಿಸಿ ಕೊಟ್ರೆ ನೆಮ್ಮದಿಯಿಂದ ನಿದ್ರೆ ಮಾಡ್ತೆ. ನಾಳಿನ ಬೆಳಕು ಕಾಣು ಯೋಗ ಇದ್ರೆ ಇರ್ತೆ. ಇಲ್ಲದ್ರೆ ಅಷ್ಟೇ.." ಅನ್ನುವುದರಲ್ಲೇ ತಿಮ್ಮು ಗಡಿಬಿಡಿಯಿಂದ ಮತ್ತೇನನ್ನೂ ಯೋಚಿಸದೇ ಅಡಿಗೆ ಮನೆಗೆ ಹೋಗಿ ಒಂದು ಲೋಟ ಅಕ್ಕಿ ತೊಳೆದು ನೀರು ಹಾಕಿ ಒಲೆಗೆ ಸೌದೆ ಒಟ್ಟುತ್ತ ಬೆಂಕಿ ಹೊತ್ತಿಸಿ ಗಂಜಿಗೆ ಇಟ್ಟಳು. ಬೆಂಕಿ ಎಂದಿಗಿಂಲೂ ತುಸು ಜೋರಾಗೇ ಉರಿದಂತಿತ್ತು. ಬೆಳಕು ಅಡಿಗೆ ಕೋಣೆಯಿಂದ ಗಿರಿಜೆ ಮಲಗಿದ್ದ ಕೋಣೆಯೊಳಗೆ ಸರಾಗವಾಗಿ ಹರಿಯುತಿತ್ತು. ಅದೇ ಮಂಚದಲ್ಲಿ ತಿಮ್ಮುವೂ ಗಿರಿಜೆಯ ಕಾಲೊತ್ತುತ್ತ ಕೂತಳು‌. ನಾಲ್ಕು ವರ್ಷದ ಮಗು ಮಂಗಲೆ ಒಲೆಯ ಸೌದೆ ಸರಿಸುತ್ತ,ಕಿಡಿಯೆಬ್ಬಿಸುತ್ತ ಬೆಂಕಿ ಬಿಸಿ ತೆಗೆದುಕೊಳ್ಳುತ್ತಿದ್ದಳು.

ತಿಮ್ಮು ಅಂದು ನಡೆದದ್ದನ್ನ ಯಾರೊಂದಿಗೂ ಹೇಳದೆ ಒಳಗೇ ಬಚ್ಚಿಟ್ಟುಕೊಂಡಿದ್ದಳು. ಎಲ್ಲಾದರೂ ತಾನು ಗಂಜಿ ಬೇಯಿಸಿಕೊಟ್ಟದ್ದು ಗೊತ್ತಾದರೆ ಏನು ಮಾಡಿಯಾರೋ ಎಂದು ಭಯದಲ್ಲೇ ಆಕೆ ದಿನದೂಡಿದ್ದಳು. ಮತ್ತೊಂದೇ ದಿನ ಅಷ್ಟೇ ಗಿರಿಜೆ ಬದುಕುಳಿದದ್ದು‌. ಅದರೊಳಗೆ ವೆಂಕಣ್ಣ ಎಮ್ಮೆಮೇಲೆ ವಿನಾಯಕನನ್ನು ಕೂರಿಸಿಕೊಂಡು ಮಧ್ಯಾನ್ನದ ಹೊತ್ತಿಗೆ ಮನೆಕಡೆ ಬಂದುಮುಟ್ಟಿದ್ದ.
ಈಗ ಮಂಗಲೆಗೆ ಮಾತ್ರ ಮೂರ್ನಾಲ್ಕು ದಿನಕ್ಕೊಮ್ಮೆ ವೆಂಕಣ್ಣ ನೆಲ ಒರೆಸುವುದಕ್ಕೆಂದು ಕೋಣೆಯಿಂದ ಸನ್ನೆ ಮಾಡುವಾಗ ಅಸ್ಪಷ್ಟವಾಗಿ ತಾನು ಮನೆಯ ಒಳಾಂಗಣದ ಆವರಣವನ್ನೆಲ್ಲ ಮೊದಲೇ ನೋಡಿದಂತೆಯೂ ಅನಿಸಿ ಮಂಚದ ಮೇಲೂ ಕೆಳಗೂ ಎಲ್ಲ ನೀಟಾಗಿ ಒರೆಸಿ ಎದ್ದುಬರುವಾಗ ಕಾಯಲೆಯಿಂದ ಮಲಗಿರುವ ಗಿರಿಜಮ್ಮನವರ ಚಿತ್ರವಷ್ಟೇ ಕಣ್ಮುಂದೆ ಬರುತ್ತಿದ್ದವು.

--RATEESH HEBBAR

Tuesday, 8 September 2020

ಊರು ಊರಾಗೇ ಇರಬಹುದೇ?

ಕೆಲಸ ಬಿಟ್ಟಿದ್ದೇನೆ ಅಂದರೆ ಅಮ್ಮ ಖಂಡಿತ ನೊಂದುಕೊಳ್ಳುತ್ತಾಳೆ. ಇಷ್ಟು ಕಷ್ಟ ಪಟ್ಟು ಓದಿಸಿ ಒಂದು ಹಂತಕ್ಕೆ ಬರುತ್ತಿದ್ದಾನೆ ಮಗ ಎಂದು ಆಸೆಗಣ್ಣಿನಿಂದ ಕಾಯುತ್ತಿರುವ ಅಪ್ಪ ಅಮ್ಮನಿಗೆ ಆಘಾತ ಕೊಡುವುದಂತೂ ಸುತಾರಾಂ ಸಾಧ್ಯವಿಲ್ಲದ ಮಾತು. ನಾಳೆಯೇ ಮತ್ತೆ ಬೆಂಗಳೂರಿನ ಬಸ್ಸು ಹಿಡಿಯುವುದೇ ಸರಿ. ಇನ್ನೆಷ್ಟು ದಿನ ಎಂದು ಇಲ್ಲಿಯೇ ಬಿದ್ದಿರಲು ಸಾಧ್ಯ. ಒಂದಲ್ಲ ಒಂದು ದಿನ ಗೊತ್ತಾಗಲೇ ಬೇಕು‌. ಮಗ ಹೇಳದೇ ತಮ್ಮಿಂದ ಬಚ್ಚಿಟ್ಟಿದ್ದಾನೆ ಎಂಬ ಸತ್ಯ ಗೊತ್ತಾದರೆ ಮತ್ತೂ ನೊಂದುಕೊಳ್ಳೊದಿಲ್ಲವಾ. ಅಪ್ಪನನ್ನು ಹೇಗಾದರೂ ಒಲಿಸಬಹುದು ಆದರೆ ಅಮ್ಮ ..! ಮಗ ಬೆಂಗಳೂರು ಬಿಟ್ಟು ಊರಲ್ಲೇ ತೋಟದ ಕೆಲಸ ಮಾಡುತ್ತಾನೆ ಎಂದರೆ ಆಕೆಯ ಹೃದಯ ತಡೆದುಕೊಳ್ಳುತ್ತದೆಯೇ? ಕಾನೂರಿನ ಯಾವ ಗಂಡು ಹುಡುಗರೂ ಪ್ಯಾಟೆಗೆ ಹೋದವರು ಹಿಂದಿರುಗಿ ಬಂದದ್ದಿಲ್ಲ. ನಾನೊಬ್ಬ ಹೀಗೆ ಬೆಂಗಳೂರು ನನ್ನಿಂದ ಸಾಧ್ಯವಿಲ್ಲ ಎಂದುಕೊಂಡು ಬಂದರೆ ತನ್ನ ಮಗ ಊರಿನಿಂದ ಓಡಿ ಪರಾರಿಯಾದ ಎಷ್ಟೋ ಪುಕ್ಕಲು ಗಂಡಸರಿಗಿಂತ ಅಸಮರ್ಥನಾದನಲ್ಲ ಎಂಬ ನೋವು ಆಕೆಗೆ ಕಾಡದಿರುತ್ತದೆಯೇ. ಅದೇನೋ ಒಂದೆರಡು ತಿಂಗಳಿಗೆ ಅಭ್ಯಾಸವಾಗಬಹುದು. ಆದರೆ ನಾನು ಈ ಹಳ್ಳಿಯ ತೋಟದ ಕೆಲಸಗಳಿಗೆ ಲಾಯಕ್ಕಾದ ಕಸುಬಿಯಂತೂ ಅಲ್ಲ. ಕಲಿಯುತ್ತೇನೆ ಅಂದರೂ ಇಪ್ಪತ್ತೈದರ ಹರೆಯದಲ್ಲಿ ಬೆನ್ನು ಬಗ್ಗುವುದು ಸಾಧ್ಯವಾ. ಒಂದು ಅಡಿಕೆಯನ್ನೂ ಹೆಕ್ಕಿದ ಅಭ್ಯಾಸವಿಲ್ಲ. ಇಂದಾದರೂ ಮಂಗಲೆಯನ್ನು ಮಾತಾಡಿಸುವುದಕ್ಕಾಗಿ ಮೆಟ್ಟಗತ್ತಿ ಮೇಲೆ ಕೂತಿದ್ದು. ಎರಡು ತಾಸು ಕೂತವನಿಗೆ ಬೆನ್ನೆಲುಬಿಗೆ ಕಸು ಹಿಡಿದಂತಾಗಿ ವಾಪಸ್ಸು ಬಂದು ಮಲಗಲಿಲ್ಲವೆ. ಎರಡು ತಾಸಾದರೂ ಸುಲಿದದ್ದು ಮಾತ್ರ ಐವತ್ತೋ ನೂರೋ ಚಾಲಿ ಇರಬಹುದಷ್ಟೇ. ಈ ಪಾಮರನಿಂದ ಕೃಷಿ ಕೆಲಸ ಸಾಧ್ಯವಿಲ್ಲದೇನು ಅನ್ನುವ ಉಮೇದಿಯಲ್ಲಿ ಬೆಂಗಳೂರು ಬಿಟ್ಟು ಬಂದದ್ದಾಯಿತು. ಎಷ್ಟು ದಿವಸ ಈ ಹಳ್ಳಿಯ ಋಣ ನನ್ನ ಮೇಲೆ ಇರುತ್ತದೆಯೋ ನೋಡುವ. ಅಲ್ಲಿಯವರೆಗೆ ಏನಾದರೂ ನೆಪ ಹೇಳಿ ಅಮ್ಮನಿಗೆ ಅನುಮಾನ ಬರದಂತೆ ಇಲ್ಲೇ ಇರುವಂತೆ ನೋಡಿಕೊಳ್ಳಬೇಕಾದದ್ದು ಕಷ್ಟದ ಕೆಲಸ. ಹಾಂ..! ಈ ಲಾಕ್ ಡೌನ್, ಕೊರೋನಾ ಮತ್ತೇನೇನೋ ಹೇಳಿ ಒಂದಾರು ತಿಂಗಳು ಕಂಪನಿಯೆಲ್ಲ ಮುಚ್ಚಿವೆಯೆಂದು ದಿನ ತಳ್ಳುವುದಕ್ಕೆ ಲಾಯಕ್ಕಾಯಿತು. ಮಗ ಸುಳ್ಳು ಹೇಳಿಲ್ಲ ಅನ್ನುವಂತೆ ಆಗಾಗ ಪುಸ್ತಕ,ಲ್ಯಾಪ್ ಟಾಪ್ ತೆಗಯುತ್ತಾ ಓದುತ್ತಿದ್ದ ಹಾಗೆ ಅವಳಿಗೆ ಕಾಣುವಂತೆ ಇದ್ದು ಅಪ್ಪನ ಸಂಗಡ ತೋಟದ ಕಡೆಗೂ, ಕೆಲಸ ನಿಧಾನಕ್ಕಾದರೂ ಸರಿಯೆ ಕಲಿಯುವ ಪ್ರಯತ್ನ ಮಾಡೋದಂತೂ ಗ್ಯಾರಂಟಿ" ಮಲಗಿದರೂ ನಿದ್ರೆ ಬರೆದಂತೆ ಕಾಡುತ್ತದೆ ಇಂಥ ಬಗೆಹರಿಯದ ಯೋಚನೆಗಳು.

" ಮಂಗಲೆಯ ಕತೆ ಹಿಂಗಾಗಬಾರದಿತ್ತು. ಪಾಪ ಅಷ್ಟು ಒಳ್ಳೆ ಹೆಣ್ಣಿಗೆ
ಇಂತ ದೌರ್ಭಾಗ್ಯ ಬಂದದ್ದು ಯೋಚಿಸೋದಕ್ಕೂ ಕಷ್ಟ ಆಗುತ್ತೆ. ಎಲ್ಲ ವಿಧಿಯಾಟ ಅಂತ ಮುಂದೆ ಹೋಗ್ಬೇಕು ಎಂದು ಜನ ಹೇಳ್ತಾರೆ. ಆದ್ರೆ ವಿಧಿ ಗಿಧಿಯನ್ನೆಲ್ಲ ನಂಬುತ್ತಿದ್ದರೆ ಜಗತ್ತು ಇಷ್ಟು ಓಡ್ತಾ ಇರಲಿಲ್ಲ ಅನ್ನೋದು ಈ ಕಣ್ಣಿಗೆ ಕಾಣುತ್ತೆ. ಏನೇ ಇರಲಿ ಅವಳದ್ದು ಪಾಪದ ಜೀವ ಅಂತೂ ಹೌದು. ಇಲ್ಲದಿದ್ದರೆ ಇಷ್ಟು ಪ್ರಾಯದ ವಯಸ್ಸಲ್ಲಿ ವೈಧವ್ಯ ಬಂತು ಅಂದರೆ ಒಪ್ಪೋದಕ್ಕೆ ಸಾಧ್ಯ ಇಲ್ಲ. ಮತ್ತೆ ಮದುವೆ ಆಗಬಹುದಿತ್ತು. ಆದರೆ ಇದು ಹಳ್ಳಿ . ಬದಲಾವಣೆಯ ಗಾಳಿ ನಗರದಲ್ಲಿ ಬೀಸುವಷ್ಟು ವೇಗವಾಗಿ ಹಳ್ಳಿಯಲ್ಲಿ ಬೀಸುದಿಲ್ಲ. ಏನಾದರಾಗಲಿ ಅವಳನ್ನು ನೆನೆಸಿಕೊಂಡರೆ ಪಾಪ ಅನಿಸುದಂತೂ ಸತ್ಯ. ಯಾರಿಗೆ ತಾನೇ ತನ್ನಿಷ್ಟದ ವಿರುದ್ಧವಾಗಿ ತಾನು ಹುಟ್ಟಿದ ಊರನ್ನು ಬಿಟ್ಟು ಬೇರೆ ಊರಿಗೆ ಹೋಗಬೇಕು ಅನಿಸುತ್ತೆ ಹೇಳಿ. ಅವಳಪ್ಪ ಶಂಭಣ್ಣನನ್ನು ಕಂಡರೆ ನನಗೂ ರೋಷ ಉಕ್ಕುತ್ತೆ. ಅವನ ಸಾರಾಯಿಯ ಅಮಲಿನ ಕೆಂಪು ಕಣ್ಣುಗಳು ಇನ್ನೂ ನೆನಪಿದೆ. ಅವಳೊಂದಿಗೇ ಬರಿದೇ ನಗುತ್ತ ಮಾತಾಡಿದ್ದಕ್ಕೆ, ಒಂದೆರಡು ಸಾರಿ ಗೆಳೆಯರೊಂದಿಗೆ ಸಿನಿಮಾಕ್ಕೆಂದು ಯಲ್ಲಾಪುರಕ್ಕೆ ಬಂದದ್ದನ್ನೇ ನೆಪ ಮಾಡಿಕೊಂಡು ಬಲವಂತದಿಂದ ಮಗಳನ್ನು ಯಾರಿಗೋ ಮದುವೆ ಮಾಡಿಕೊಟ್ಟು ಈಗ ಗಂಡ ಸತ್ತ ವಿಧವೆಯಾಗಿ ತವರಿಗೆ ಬಂದವಳನ್ನು ಸಾಕುವ ಹಣೆಬರಹ ಯಾರಿಂದ ತಪ್ಪಿಸಲಿಕ್ಕಾಯಿತು.? ಹೊತ್ತು ಹೋಗದೇ ಯಾರಾದರೂ ಮಾತಿಗೆ ಸಿಕ್ಕರೆ ಸಾಕು ಅನ್ನುವ ಸ್ಥಿತಿಯಲ್ಲಿ ಗಂಡಸರೊಂದಿಗೆ ಮಾತಿಗಿಳಿದರೆ ಹಾದರದ ಮುಂಡೆ ಎನಿಸಿಕೊಳ್ಳಬೇಕಾದೀತೆಂದು ಪುರುಷರೆದುರಲ್ಲಿ ಆಕೆ ಮೂಕಿಯಾಗಿದ್ದಳೆ.
ಹಾಗೆ ಮರೆಯೋದಕ್ಕೆ ಸಾಧ್ಯವಿದ್ದಿದ್ದರೆ ಈ ಊರಿಗೆ ವಾಪಸ್ಸು ಬರುವ ಕಷ್ಟ ಮೈ ಮೇಲೆ ಎಳೆದುಕೊಳ್ಳುತ್ತಲೇ ಇರಲಿಲ್ಲ. ಅಮ್ಮ ಗೊತ್ತಾದರೆ ನೊಂದುಕೊಳ್ಳುತ್ತಾಳೆ ನಿಜ. ಆದರೆ ಅವಳ ಬದುಕನ್ನ ಇಲ್ಲೇ ಸವೆಸಿದ್ದಾಳೆ. ಇನ್ನು ನನ್ನ ಜೀವನದಲ್ಲಿ ಇಲ್ಲೇ ಬದುಕಬೇಕೆಂದು ಇಚ್ಛೆ ನನ್ನದು ಎಂದು ಪ್ರೀತಿಯಿಂದ ಹೇಳಿದರೆ ಅರ್ಥ ಮಾಡಿಕೊಳ್ಳುತ್ತಾಳೆ. ಅವಳಿಗೆ ಊರವರ ಮಕ್ಕಳೆಲ್ಲ ಹೊರಗಡೆ ದುಡಿಯುತ್ತಿದ್ದ ಹಾಗೇ ತನ್ನ ಮಗನೂ ನೌಕರಿ ಮಾಡಬೇಕೆಂದು ಆಸೆ ಇರಬಹುದು. ಎಷ್ಟು ದಿನ?
ಅವಳಿಗೂ ವಯಸ್ಸಾದರೆ ಬೆಂಗಳೂರಿಗೆ ಮಗನಿರುವಲ್ಲಿಗೆ ಬರುವ ಬಯಕೆಯಾಗುದಿಲ್ಲವೆ. ಬಯಕೆ ಬೇಡ ಬಿಡಿ; ಅನಿವಾರ್ಯ ತಾನೇ.. ಅಪ್ಪ ಗಟ್ಟಿಯಿರುವರೆಗೆ ಇಲ್ಲಿ ಯಾವ ಸಮಸ್ಯೆಯೂ ಆಕೆಗೆ ಸುಳಿಯುದಿಲ್ಲ.ಅದೇ ಇನ್ನೊಂದು ಐದಾರು ವರ್ಷವಾದರೆ ಅಪ್ಪನಿಗೂ ಅರವತ್ತು ದಾಟುತ್ತೆ. ಈಗಲೇ ಅಪ್ಪನ ಮುಖ ನೋಡುವುದಕ್ಕೆ ನೋವಾಗುತ್ತೆ. ಕೆನ್ನೆ ಗಂಟಿಕ್ಕಿದೆ‌. ಗಡ್ಡದಿಂದ ಹಿಡಿದು ಕೂದಲೆಲ್ಲ ಬೆಳ್ಳಿ ಸರಿಗೆಗಳಂತಾಗಿದೆ. ಹಣೆಯ ನಯ ಹೋಗಿ ಸುಕ್ಕು ಕಾಣಿಸುತ್ತೆ. ಯಾಕೆ ಮಾತಾಡುವುದಿಲ್ಲ ಮಗ ಅಂತ ಅಪ್ಪ ದಃಖ ಪಟ್ಟಿರಬಹುದು. ಆದರೆ ಅವನನ್ನು ನೋಡಿದರೆ ನನಗೆ ಮಾತಾಡುವುದಕ್ಕೂ ದುಗುಡ ಉಂಟಾದ್ದರ ಕಲ್ಪನೆ ಅವನಿಗೆ ಬರಲಿಕ್ಕೆ ಹೇಗೆ ಸಾಧ್ಯ.? ಹೆಗಲ ಮೇಲೆ ಕೂರಿಸಿಕೊಂಡು ಆಟವಾಡಿಸುತ್ತಿದ್ದ ಅವನ ಹೆಗಲು ಈಗ ಬಾಗಿ ಬೆನ್ನು ಬಿದ್ದು ಹೋಗದಂತೆ ಕಾಪಿಡಲು ಜೋತಾಡುತ್ತಿರುವುಂತೆ ಕಾಣುವುದನ್ನು ಈ ಕಣ್ಣಿಂದ ನೋಡಿಯೂ ಚೆನ್ನಾಗಿದ್ದೀಯಾ ಅಪ್ಪಾ ಎಂದು ಮಾತಾಡಿಸುವುದಾದರೂ ಹೇಗೆ ಹೇಳು ?" ಗದ್ಗದಿತನಾಗಿ ಕಣ್ಣಿಂದ ಹನಿ ಜಾರದೆ ಅಂಚಿನಲ್ಲೇ ಕುಳಿತು ಹೆಪ್ಪಾಯಿತು.

ಒಂದೆರಡು ವಾರಗಳು ಅತಿಥಿಯಂತೆ ಕಳೆದುಹೋಯಿತು. ಮುಂದೆ ಏನೆಂಬುದಕ್ಕೆ ಯಾರಿಗೂ ಗೊತ್ತಿಲ್ಲ ಅನ್ನುವ ವಿಚಾರವನ್ನೇ ಅಮ್ಮನಿಗೆ ತಿಳಿಸಿದೆ. ಆರು ತಿಂಗಳಷ್ಟು ಅಂದರೆ ಹಚ್ಚೇ ಸಮಯವಾಗುತ್ತದೆ. ಮಾಣಿ ಮನೆಯ ಕಡೆಯೇ ಇರುತ್ತಾನೆ ಅನ್ನುವ ಸಣ್ಣ ಪ್ರಮಾಣದ ಸಂತಸ ಒಳಗಿಂದ ಇದ್ದರೂ ಸಹ ಕಾನೂರಿನ ಸಮಾಜಕ್ಕೆ ಮಕ್ಕಳು ಹೊರಗಿರುವುದೇ ಶೋಭೆಯೆಂಬ ಅಲಿಖಿತ ಭಾವವಿರುವುದು ಅಮ್ಮನನ್ನು ಕಾಡದಿರಲಿಲ್ಲ. ಊರಲ್ಲೇ ಉಳಿದ ಹುಡುಗರನ್ನು ಹರಾಮ್ ಕೋರರೆಂದು ಜನ ತಿಳಿಯುವುದು ಅವಳಿಗೆ ಹೊಸತಾಗಿರಲಿಲ್ಲ.ಅವರೂ ಅಷ್ಟೇ.. ಕಾನೂರಿನ ಹಿರಿಯ ಜನ ಹೇಳುವ ಸಂಸ್ಕೃತಿಗೆ ತಕ್ಕ ಹಾಗೆ ಬದುಕು ಕಟ್ಟಿಕೊಂಡಿದ್ದರೆ ಅಂತಹ ಭಾವ ಮೊಳೆಯುತ್ತಿರಲಿಲ್ಲದಿರಬಹುದು. ಹೈಸ್ಕೂಲು ಮುಗಿಸಿದ ಹುಡುಗರು ಗುಟ್ಕಾ,ಸಿಗರೇಟು,ಶರಾಬು,ಬೈಕು ಎಂದು ಹಣ ಪೋಲು ಮಾಡುವುದು ಎಲ್ಲೆಲ್ಲೋ ಯಾವ್ಯಾವುದೋ ಕೆಲಸ ಮಾಡುತ್ತೇನೆಂದು ಊರೂರು ಅಲೆಯುವುದನ್ನು ನೋಡಿದ ತಾಯಂದಿರ ಕರುಳು ಕಿತ್ತುಬರದೇ ಇರುತ್ತದೆಯೇ.? ಕಾನೂರಿನ ತಾಯಂದಿರ ಸ್ವಭಾವ ಮಾತ್ರ ಎಷ್ಟು ದ್ವಂದ್ವವಾಗಿ ಕಾಣುವುದೆನ್ನುವುದಕ್ಕೆ ಸಣ್ಣ ಉದಾಹರಣೆಗೆ ,ಗದ್ದೆ, ಬೇಣಗಳನ್ನೆಲ್ಲ ಬೋಳಿಸಿ ಅಡಿಕೆ ಮರ ನೆಟ್ಟು ಲೊಡುಗಟ್ಟಲೆ ಸುಪಾರಿ ಬೆಳೆಯುವ ಅವರಿಗೆ ಅದೇ ಅನ್ನ ನೀಡುವ ತಾಯಿಯಂತೆ ಕಾಣುತ್ತದೆ. ಜಗತ್ತೆಲ್ಲ ಪಾನು,ಗುಟಕಾ ಸೇವಿಸುವುದಕ್ಕೆ ಯಾವ ಅಡ್ಡಿಯೂ ಇಲ್ಲದ ಇವರಿಗೆ ತಮ್ಮ ಮನೆ ಮಕ್ಕಳು ಮಾತ್ರ ತಂಬಾಕಿನ ಕವಳ ಹಾಕಿದರೂ ಸಹಿಸಲಾಗುವುದಿಲ್ಲ.
ಪಾನು, ಗುಟಕಾ ಹಾಕಿ ಹಲ್ಲು ಕೆಂಪಗಾಗಿಸಿಕೊಂಡವನಿಗೆ ಯಾರು ಹೆಣ್ಣು ಕೊಡುತ್ತಾರೆ ಎನ್ನುವುದು ಅವರ ವಿಚಾರ. ಇದ್ದರೂ ಇರಬಹುದು‌. ಕಾನೂರಿನಲ್ಲಿ ಯಾವಾಗ ಎಂತೆಂತಹ ಮನೋಭಾವ ಬೆಳೆದಿರುತ್ತದೆ ಎಂಬುದಕ್ಕೆ ಯಾವುದೇ ನಿರ್ದಿಷ್ಟತೆ ಇಲ್ಲ. ಬೇರೆಲ್ಲ ಸಮಾಚಾರಕ್ಕಿಂತ ಸಂಸ್ಕೃತಿಯ ವಿಷಯದಲ್ಲಿ ಮಾತ್ರ ಅದು ಪಾರ್ಥೇನಿಯಂನಂತೆ ಹಬ್ಬಿರುತ್ತದೆ‌. ಪಟ್ಟಣದ ನಾಗರಿಕರು ಎಷ್ಟು ನೀಟಾಗಿ ಸುಂದರ ಸುಸಂಸ್ಕೃತವಾಗಿ ಕಾಣುತ್ತಾರೋ ಅವರ ವ್ಯಸನಗಳೂ ಅಷ್ಟೇ ಸಫೆಸ್ಟಿಕೇಟೆಡ್ ಆಗಿರುತ್ತದೆಯೆಂದು ಇಲ್ಲಿನ ತಾಯಂದಿರಿಗೆ ಕಾಣುವುದಿಲ್ಲ. ಹಳ್ಳಿ ಹಳ್ಳಿಯಾಗೇ ಇರುತ್ತದೆಯೆಂದು ನಗರವಾಸಿಗಳು ಭಾವಿಸಬಹುದು. ಅದು ನಿಜವಲ್ಲ. ಹಳ್ಳಿಯ ಹರಯದ ಹುಡುಗರಿಗೆ ನಗರದ ಕನಸು ಹೆಣ್ಣಿನ ಆಸೆಯಂತೇ ಪುಟಿಯುತ್ತಿರುತ್ತದೆ‌. ಶಹರದ ಸೌಲಭ್ಯಗಳು ದೊರಕದ ಮಾತ್ರಕ್ಕೆ ಹಳ್ಳಿ ಯಾವಾಗಲೂ ಹೀಗೇ ಇರುತ್ತದೆಯೆಂದು ತಿಳಿಯುವುದು ದಡ್ಡತನ. ಹೊಸ ಹುಡುಗ ಹುಡುಗಿಯರಿಗೆ ಬೆಂಗಳೂರಿನ ಸ್ವಪ್ನ ನಿದ್ದೆಗೆಡಿಸುವುದಕ್ಕೆ ಪರಿಹಾರ ಇಲ್ಲದ ಹಾಗೇ ಹಳ್ಳಿ ಬದಲಾಗುವುದನ್ನು ತಡೆಯುವುದಕ್ಕೂ ಸಾಧ್ಯವಿಲ್ಲ. ಬದಲಾವಣೆ ಬೆಂಗಳೂರಿಗೆ ಮಾತ್ರ ಬೇಕು ಅನ್ನುವುದೂ ಸರಿಯಲ್ಲ. ಮೂಲೆಯ ಹಳ್ಳಿ ಕಾನೂರಿಗೂ ಹೊಸ ಅಂಗಿ ಧರಿಸಬೇಕೆಂಬ ಆಶೆಯಾಗುವುದರಲ್ಲಿ ತಪ್ಪೇನೂ ಇಲ್ಲ.
ಮಡಿ ಮೈಲಿಗೆಯಿಲ್ಲದ ಬೆಂಗಳೂರಿಗೆ ರೋಗ ಬರದೇ ಕಾನೂರಿಗೆ ರೋಗ ತಗುಲುತ್ಯೇ ಅನ್ನುವ ಮಡಿವಂತ ಮುಟ್ಠಾಳರಿಗೆ ತಮ್ಮ ಮಕ್ಕಳು ಬೆಂಗಳೂರಿಂದ ಕಳಿಸುವ ತಿಂಗಳೊಪ್ಪತ್ತಿನ ನೋಟುಗಳು ಹೇಗೆ ಬಂದುವು ಎಂದು ಕೇಳುವ ಧೈರ್ಯವಾಗುವುದಿಲ್ಲ. ಮೈಲಿಗೆ ತಗುಲದೇ ಮಡಿಯ ವ್ಯಾಮೋಹ ಕಳಚಿಕೊಳ್ಳುವುದು ಸಾಧ್ಯವಾಗಿದ್ದರೆ ಇಪ್ಪತ್ತೈದರ ಹರಯದಲ್ಲೇ ವೈಧವ್ಯ ಅಂಟಿಸಿಕೊಂಡ ಮಂಗಲೆಯನ್ನು ನೋಡಿ ಮರುಕ ಹುಟ್ಟುತ್ತೆ. ಅವಳದ್ದು ತಪ್ಪು ಎಂದು ಹೇಳುವುದಿಲ್ಲ‌. ಆದರೆ ಸರಿಯನ್ನಾದರೂ ಅಪ್ಪಿಕೊಳ್ಳಬಹುದಿತ್ತೇನೋ ಎಂದನಿಸುತ್ತದೆ.
ನಗರಗಳ ಗಾಳಿ ಬೀಸುವವರೆಗೂ ಹಳ್ಳಿಯಲ್ಲಿ ಶತಮಾನಗಳಿಂದ ಲಸಿಕೆ ಸಿಗದೇ ನಾರುತ್ತಿರುವ ರೋಗಗಳು ಹಾಗೇ ಸಾಂಕ್ರಮಿಸುತ್ತಲೇ ಇರುತ್ತದೆ. ಶತಮಾನದಿಂದ ಶತಮಾನಕ್ಕೆ ತಲೆಮಾರಿನಿಂದ ತಲೆಮಾರಿಗೆ...
ಹಳೆಯ ಪಂಚೆಯನ್ನೇ ತೊಳೆದು ತೊಳೆದು ಉಡುವ ಕಾನೂರಿನ ಹಳೆಯ ಜನಕ್ಕೆ ತಮ್ಮೂರ ಮಕ್ಕಳು ಇಂಗ್ಲೀಷಿನ ಪ್ಯಾಂಟು ಧರಿಸುವುದನ್ನು ನೋಡಿ ಹೆಮ್ಮೆಯಾಗುವುದರಲ್ಲಿ ನನಗೇನೂ ವಿರೋಧಾಭಾಸ ಕಾಣಿಸುವುದಿಲ್ಲ. ಊರಲ್ಲೇ ಉಳಿದ ಮಂಗಲೆಯಂತ ಎಷ್ಟೋ ಯುವಕ- ಯುವತಿಯರು ಮಾತ್ರ ಹೊಸ ಪ್ಯಾಂಟೂ ಸಿಗದೆ ಹಳೇ ಪಂಚೆಯೂ ಸಿಗದೆ ಬೆತ್ತಲಾಗುವುದನ್ನು ತಡೆಯಲು ನಮ್ಮ ನಿಮ್ಮಿಂದ ಸಾಧ್ಯವಾಗುವ ಮಾತಾದರೂ ಹೌದೇ..?

- ರತೀಶ ಹೆಬ್ಬಾರ.

Friday, 1 May 2020

ಭಾರತೀಪುರ



ಮಲೆನಾಡಿನ ಜಮೀನುದಾರ ವಂಶದ ಜಗನ್ನಾಥ ಲಂಡನ್ನಿನಲ್ಲಿ ಓದಿ ಬಂದವನು. ತನ್ನ ಊರಿನ ವಾಸ್ತವತೆಯನ್ನು ಅರಿತು ಈ ದೇಶದ ದಲಿತರ,ಕೆಳಜಾತಿಯವರ ಮೇಲೆ ನಡೆದ ಶೋಷಣೆಯನ್ನು ಗ್ರಹಿಸಿ ತಾನು ಇದಕ್ಕೇನಾದರೂ ಮಾಡಲೇಬೇಕೆಂದು ಕ್ರಾಂತಿಯ ಆಸೆ ಮೂಡಿಸಿಕೊಂಡವನು. ಊರಿನಲ್ಲಿ ಆಚರಿಸಲ್ಪಡುತ್ತಿದ್ದ ಅಸ್ಪ್ರಶ್ಯತೆ,ಜಾತಿ ತಾರತಮ್ಯ, ಮೊದಲಾದವುಗಳನ್ನು ಅನಾಚಾರಗಳೆಂದು ತಿಳಿದು ಹೊಲೆಯರ ಉದ್ಧಾರವಾಗದೇ ಈ ಊರು ಚಲಿಸುವುದಿಲ್ಲ;ಇದ್ದಂತೆಯೇ ತೆವಳುತ್ತಿರುತ್ತದೆ,ಇಲ್ಲಿ ಈ ಬ್ರಾಹ್ಮಣಶಾಹೀ ಪರಿಸರದ ಮುಕ್ತಾಯವಾಗದೇ ಏನೂ ಹೊಸತು ಹುಟ್ಟುವುದಿಲ್ಲವೆಂದು ಭಾವಿಸಿ ಭಾರತೀಪುರದಲ್ಲಿ ಮಂಜುನಾಥನ ಸನ್ನಿಧಿಗೆ ಹೊಲೆಯರ ಪ್ರವೇಶದ ಕನಸು ಕಾಣುತ್ತಾನೆ‌. ಅವರಿಗೆ ಅಕ್ಷರಾಭ್ಯಾಸ ಮಾಡಿಸುವ ಪ್ರಯತ್ನ ಮಾಡುತ್ತಾನೆ. ಆದರೆ ಎಷ್ಟೇ ತಾನು ಅವರನ್ನು ಹತ್ತಿರವಾಗಿಸಿಕೊಳ್ಳಲು ಪ್ರಯತ್ನಿಸಿದರೂ ಈ ಹೊಲೆಯರು ಈ ಕಟ್ಟುಪಾಡುಗಳಿಂದ ಆಚೆ ಬರಲು ಹೆಣಗುತ್ತಾರೆಂದರೆ ಅದೆಷ್ಟು ಆಳವಾಗಿ ಮೌಢ್ಯವನ್ನು ಬಿತ್ತಲಾಗಿದೆಯೆಂಬುದನ್ನು ಪರಾಮರ್ಷಿಸುತ್ತಾನೆ.

ಅನಂತಮೂರ್ತಿಯವರು ತಮ್ಮ ಕತೆಗಳಲ್ಲಿ ಲೈಂಗಿಕ ಸ್ವಾತಂತ್ರ್ಯದ ಬಗ್ಗೆಯೂ ಹಲವಾರು ಬಾರಿ ಧ್ವನಿಯೆತ್ತಿದಂತೆಯೇ ಇದರಲ್ಲೂ ಜಗನ್ನಾಥನ ಮುಖೇನ ಬ್ರಾಹ್ಮಣರು ಹೊಲೆಯ ಹೆಂಗಸರನ್ನು ಮೋಹಿಸುವುದನ್ನೂ ಆದರೆ ಹೊಲೆಯರು ಬ್ರಾಹ್ಮಣ ಹೆಂಗಸರನ್ನು ಮುಟ್ಟಿದರೆ ಅದು ಅಪರಾಧವೆಂಬ ಛಾಯೆಯನ್ನು ಹೊಡೆದೋಡಿಸಲು ಪ್ರಯತ್ನಿಸುತ್ತಾರೆ. ಯಾವಾಗ ಬ್ರಾಹ್ಮಣ ಹೆಂಗಸರಿಗೆ ಹೊಲೆಯನ ಕಪ್ಪು ದೇಹದ ಮೇಲೆ ಮನಸ್ಸಾಗುವುದೋ ಹಾಗೇ ಮಲ್ಲಿಗೆ ತುರುಬಿನ ಹೊಲೆಯ ಹೆಂಗಸಿನ ಮೇಲೆ ಬ್ರಾಹ್ಮಣನಿಗೆ ಮನಸಾಗುವುದೋ ಹಾಗಾದರೆ ಮಾತ್ರ ಈ ಅಸ್ಪ್ರಶ್ಯತೆಯ ಕಂದಕಗಳನ್ನು ದೂರಮಾಡಲು ಸಾಧ್ಯವೆಂಬುದನ್ನು ಪರಿಗ್ರಹಿಸುತ್ತಾರೆ.

ದೇವರ ಮೇಲಿನ ನಂಬಿಕೆ ಕಳೆದುಕೊಳ್ಳದೇ ಈ ಜನ ಮುಂದೆ ಬರುವುದಿಲ್ಲವೆಂಬ ಭಾವನೆ ಜಗನ್ನಾಥನದ್ದಾಗಿದ್ದೂ ಆತ ನಿರೀಶ್ವರವಾದಿಯಾಗಿದ್ದುಕೊಂಡು ಹೊಲೆಯರನ್ನು ಮಂದಿರ ಪ್ರವೇಶಕ್ಕೆ ಕರೆ ಕೊಡುವುದು ವಿರೋಧಾಭಾಸಕ್ಕೆ ಒಳಗಾದರೂ ಅದು
ಸಮಾನತೆಯ ಹಾದಿಯಲ್ಲಿ ಔಚಿತ್ಯಪೂರ್ಣವಾದದ್ದೇ ಆಗುತ್ತದೆ. ಸಾಲಿಗ್ರಾಮವನ್ನು ತಾನಾಗಿಯೇ ತಂದೊಡ್ಡಿದರೂ ಈ ಹೊಲೆಯರು ಮುಟ್ಟುವುದಿಲ್ಲವೆಂಬ ಸತ್ಯ ಕಂಡು ಖಿನ್ನನಾಗುವ ಜಗನ್ನಾಥ ಆಳವಾಗಿ ಬೇರೂರಿದ ಈ ವ್ಯವಸ್ಥೆಯನ್ನು ಬುಡಮೇಲು ಮಾಡುವುದು ಎಷ್ಟು ಜಟಿಲವಾದ್ದು ಎಂಬುದನ್ನು ಮನಗಾಣುತ್ತಾನೆ. ಹೊಲೆಯರಲ್ಲಿ ಭೂತರಾಯನ ನಂಬಿಕೆ ಉಳಿಸುವ ಸಲುವಾಗಿಯೇ ನಡೆಸುವ ಮಸಲತ್ತುಗಳು ಹೇಗೆ ಅವರನ್ನು ದಾಸ್ಯದ ನೆರಳಲ್ಲೇ ಬದುಕುವಂತೆ ಮಾಡುತ್ತದೆಯೆಂಬುದರ ಚಿತ್ರಣವನ್ನು ನೀಡುತ್ತಾರೆ.


"ರುಚಿಯಾದ ಕೂಳು ಬೇಯಿಸಲೆಂದೇ  ಬದುಕುವ ಈ ಹೆಂಗಸರು;ಹೊಟ್ಟೆ ಸೇರಿದ ಈ ಕೂಳು ಪಾಯಿಖಾನೆಯಾದುದನ್ನು ಎತ್ತಲೆಂದೇ ಬದುಕುವ ಹೊಲೆಯರು; ಏತನ್ಮಧ್ಯೆಯೇ ಆಹಾರವನ್ನು ಜೀರ್ಣಿಸಿಕೊಳ್ಳುತ್ತ ಚಾವಡಿಯ ಮೇಲೆ ಕೂರುವ ಭಾರತೀಪುರದ ಪೌರರು" ಎಂದು ಲೇಖಕರು ಭಾರತೀಪುರದ್ದಷ್ಟೇ ಅಲ್ಲ ಇಡೀ ಭಾರತೀಯ ಸಮಾಜದ ಬ್ರಾಹ್ಮಣಶಾಹೀ ವ್ಯವಸ್ಥೆಯನ್ನು ಟೀಕಿಸುತ್ತಾರೆ‌.

"ಹೊಲೆಯನಿಲ್ಲದಿದ್ದರೆ ಅನುಭಾವಿಯ ಹೇಲೂ ನಾರುತ್ತದೆ ಎಂಬ ಪ್ರಜ್ಞೆ ಹುಟ್ಟಿದರೆ ಕಾಲ ಚಲಿಸುತ್ತದೆ" ಎನ್ನುವ ಮೂಲಕ ಹೊಲೆಯನನ್ನು ಕಂಡು ಮುಖ ತಿರುಗಿಸುವ ಮೇಲ್ವರ್ಗದವರನ್ನು ಜರಿಯುತ್ತಾರೆ. ಬ್ರಾಹ್ಮಣನಾಗಿದ್ದೂ ಕೆಳವರ್ಗದವರ ದನಿಯಾಗುವಾಗ ಎದುರಿಸುವ ನಿಕೃಷ್ಟವನ್ನು ತಲೆ ಮೇಲೆ ಹೊತ್ತು ಮುನ್ನಡೆಯುವ ಜಗನ್ನಾಥನ ನಿರ್ಧಾರ ಅಚಲವಾದದ್ದು. ಅದರ ಫಲವಾಗಿಯೇ ಕೊನೆಗೂ ಹೊಲೆಯರನ್ನು ಮಂಜುನಾಥನ ದೇವಾಲಯವನ್ನು ಪ್ರವೇಶಿಸುವಂತೆ ಮಾಡುವಲ್ಲಿ ಸಫಲನಾಗುತ್ತಾನೆ. ಆದರೆ ಗಣೇಶಭಟ್ಟನ ಚರಿತ್ರೆ ಇಲ್ಲಿ ಇನ್ನೂ ಮುಖ್ಯವಾಗುತ್ತದೆ. ಕಾರಣ ಬ್ರಾಹ್ಮಣ ಪುರೋಹಿತನ ಮಗನಾಗಿ ಆತನ ನಾಸ್ತಿಕ ವಿಚಾರಗಳೂ, ಸಂಪ್ರದಾಯದ ಕಟ್ಟೆಯೊಳಗಿನ ಮೌಢ್ಯಗಳು ಆತನನ್ನು ಹೇಗೆ ಮಾನಸಿಕ ಸ್ಥಿಮಿತ ಕಳೆದುಕೊಳ್ಳುವಂತೆ ಮಾಡಿತೆಂಬುದು ಹಲವಾರು ಪ್ರಾತ್ಯಕ್ಷಿಕ ಉದಾಹರಣೆಗಳ ಅಭಿವ್ಯಕ್ತಿಯಾಗುತ್ತದೆ. ನೀಲಕಂಠ ಸ್ವಾಮಿಯ ರಾಜಕೀಯ ಉದ್ದೇಶಪೂರಿತ ವ್ಯಕ್ತಿತ್ವವು ಮಂಜುನಾಥನ ಮೂರ್ತಿ ಇಲ್ಲವಾದಾಗ ನಡೆದುಕೊಂಡ ರೀತಿಯಿಂದ  pseudo ಮನೋಭಾವವನ್ನು ಪ್ರತಿನಿಧಿಸುತ್ತದೆ. ಜನ ಹೇಗೆ ಅಷ್ಟು ಸುಲಭವಾಗಿ ಭೂತರಾಯ‌ನ ಕ್ರಿಯೆಯೆಂದು ನಂಬಿದರೆಂಬುದು ಜಗನ್ನಾಥನಿಗೆ ದ್ವಂದ್ವವಾಗಿ ಈ ಭಾರತೀಪುರದ/ಭಾರತೀಯ ಜನರ ಮನಸ್ಥಿತಿಯನ್ನು ಬದಲಾಯಿಸುವುದು ಅಷ್ಟು ಸುಲಭದ್ದಲ್ಲವೆನ್ನುವಲ್ಲಿಗೆ ಕಾದಂಬರಿ ಮುಗಿಯುತ್ತದೆ.

ದಕ್ಕಬೇಕಾದ್ದನ್ನು ದಕ್ಕಿಸಿಕೊಳ್ಳುವಂತೆ ಮಾಡಲು ಕೆಳವರ್ಗದವರನ್ನು ಬಂಡಾಯವೇಳಿಸುವ ರೊಚ್ಚಿಗೆ ಬೀಳುವಂತೆ ಮಾಡುವ ಜಗನ್ನಾಥನ ಪ್ರಯತ್ನವನ್ನು ಮಟ್ಟಹಾಕುವ ಶಕ್ತಿಗಳು ಹೇಗೆ ಈ ವ್ಯವಸ್ಥೆಯನ್ನು ಹಿಡಿದಿಟ್ಟುಕೊಂಡಿದ್ದಾರೆ ಎಂಬುದರ ಚಿತ್ರಣವನ್ನು ಲೇಖಕರು  ಓದುಗರಿಗೆ ನೀಡುತ್ತಾರೆ. ಗಾಂಧಿ,ಲೋಹಿಯಾ,ಮಾರ್ಕ್ಸ್ ವಿಚಾರಗಳಿಂದ ಪ್ರಭಾವಿತನಾದ ಜಗನ್ನಾಥನ ಮುಖಾಂತರ ಅಭಿವ್ಯಕ್ತಿಸಿದ ಕಥಾನಕವು ಲೇಖಕರ ಸಮಾಜವಾದದ ದೃಷ್ಟಿಕೋನವನ್ನೂ ಓದುಗನಿಗೆ  ತಲುಪಿಸುವಲ್ಲಿ ಅನಂತಮೂರ್ತಿಯವರು ಗೆದ್ದಿದ್ದಾರೆ. ಎಷ್ಟು ಬೇಕೋ ಅಷ್ಟು ಮಾತ್ರ
ವಿಷಯಗಳನ್ನು ಪ್ರತಿಪಾದಿಸುವ ಮೂಲಕ ಎಲ್ಲಿಯೂ ಎಳೆದಂತೆನಿಸದೇ,ಭಾಷೆಯೂ ಅಷ್ಟೇ ಹಿಡಿತದಿಂದ ಒಂದು ಸಶಕ್ತ ಕಾದಂಬರಿಯಾಗಿ ಭಾರತೀಪುರ ನಮ್ಮೆದುರಿಗಿದೆ.






Friday, 24 April 2020

ದಾಟು

ದಾಟು

ಜಾತಿ ಎಂಬುದು ನಮ್ಮಲ್ಲಿ ಎಂದಿನಿಂದ ರೂಢಿಯಲ್ಲಿತ್ತು ಯಾವಾಗ ಅದು ಸಮಸ್ಯೆಯಾಯಿತು ಎಂಬ ಅರಿವು ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಅದರ ತಾರ್ಕಿಕ ಅಧ್ಯಯನ ಅಗತ್ಯವಾದದ್ದು. ಆ ಹಿನ್ನೆಲೆಯಲ್ಲಿ ಜಾತಿಪದ್ಧತಿಯ ಪರಿಣಾಮಗಳು ಸಮಾಜದಲ್ಲಿ ಯಾವ ರೀತಿಯಲ್ಲಿ ಅಸಮಾನತೆಯ ಕಂದಕಗಳನ್ನು ಸೃಷ್ಟಿಸಿವೆ ಎನ್ನುವ ತಿಳುವಳಿಕೆ ನಮಗಿರಬೇಕಾದದ್ದು. ಗಾಂಧಿಯವರ ಸತ್ಯಾಗ್ರಹ,ಜ್ಯೋತಿ ಬಾಫುಲೆ ಯವರ ಶಿಕ್ಷಣದ ಜಾಗೃತಿ ಹೇಗೆ ಸಮಾಜದ‌ಲ್ಲಿ ಕೆಳವರ್ಗದವರೆಂದು ಗುರುತಿಸಲಾದವರನ್ನು ಮೆಲಕ್ಕೆತ್ತಲು ಪರಿಣಾಮ ಬೀರಿತ್ತೆಂಬುದು  ಕಾಣಸಿಗುತ್ತದೆ. ದಲಿತ ಸಾಹಿತ್ಯದ ಏರುಗತಿಯ ಸಮಯದಲ್ಲಿ ಈ ಕಾದಂಬರಿ ಸಮಾಜದ ವರ್ಗ ಕೇಂದ್ರಿತ ವ್ಯವಸ್ಥೆಯ ಬಗೆಗಿದ್ದ ಧೋರಣೆಗಳನ್ನು ಬಿಂಬಿಸುವಲ್ಲಿ ಪ್ರಮುಖ ಸ್ಥಾನ‌ ಹೊಂದುತ್ತದೆ.
ಕಾದಂಬರಿಯ ಕೇಂದ್ರಬಿಂದುವಾಗಿ ಬ್ರಾಹ್ಮಣ ಕನ್ಯೆ ಸತ್ಯ ಮತ್ತು ಕ್ಷತ್ರಿಯ ಹುಡುಗ ಶ್ರೀನಿವಾಸ( ತಿರುಮಲೇಶ ಗೌಡ) ರ ನಡುವಿನ ಪ್ರೇಮದೊಂದಿಗೆ ಅಂಟಿಕೊಂಡ ಕತೆ ರಾಜಕೀಯ ವ್ಯವಸ್ಥೆ, ಸಾಮಾಜಿಕ ಸ್ಥಿತಗತಿಗಳನ್ನು ಆಳವಾಗಿ ಮನದಟ್ಟು ಮಾಡುವತ್ತ
ಹೆಜ್ಜೆಹಾಕಿದೆ. ಮುಂದೆ ನಮ್ಮ ಮಕ್ಕಳ ಕಾಲದಲ್ಲಿ ಎಲ್ಲ ಸರಿಯಾಗಿಬಿಡುತ್ತದೆ ಎಂದು ಕೂರುವುದಕ್ಕಿಂತ ಆ ಬದಲಾವಣೆ ನಮ್ಮಿಂದಲೇ ಏಕಾಗಾಬಾರದು ಎಂಬ ಮನೋಭಾವದ ಸತ್ಯ ಜಾತಿವ್ಯವಸ್ಥೆಯ ಮೇಲೆ ನಂಬಿಕೆಯನ್ನು ತೊರೆದಿದ್ದಳು. ಬ್ರಾಹ್ಮಣ,ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ಸ್ತರಗಳಿಂದ ಸಮಾಜವ್ಯವಸ್ತೆಯು ಒಡೆದುಹೋಗಿದೆ ಎಂದು ಭಾವಿಸಿದ್ದಳು. ಇದನ್ನು ತೊಡೆಯುವ ಹಾದಿಯಲ್ಲಿ ಅಂತರ್ಜಾತಿ ವಿವಾಹ ಪ್ರಮುಖ ಮಾರ್ಗ ಎಂದೂ ಅವಳ ಭಾವನೆ. ಇವುಗಳ ಮೂಲಕ ೬೦-೭೦ ರ ದಶಕದ ಸಾಮಾಜಿಕ ಸ್ಥಿತ್ಯಂತರಗಳನ್ನು ಉಲ್ಲೇಖಿಸುವ ಕಾದಂಬರಿಯು ದಲಿತರು,ಹರಿಜನರು ತಮ್ಮ ಸಮಾನತೆಗಾಗಿ ಮಂದಿರಪ್ರವೇಶದಂತಹ ಸಾಹಸಕ್ಕೆ ಕೈ ಹಾಕುವ ಘಟನೆಗಳು ನಡೆಯುತ್ತದೆ. ಈ ಕೃತ್ಯಕ್ಕೆ ಸರ್ಕಾರದ ಬೆಂಬಲವು ಹೇಗೆ ರಾಜಕೀಯ ಕುಟಿಲತೆಗಳನ್ನು,ವೋಟ್ ಬ್ಯಾಂಕಿನ ಮಿಷನರಿಗಳನ್ನು ಹುಟ್ಟುಹಾಕಿತು ಎಂಬುದನ್ನು ಸೂಕ್ಷ್ಮವಾಗಿ ಬಿಚ್ಚಿಡುತ್ತದೆ.

ಶತಮಾನಗಳಿಂದ ಬಂದ ಅಸಮಾನತೆಯನ್ನು ಕ್ಷಣದಲ್ಲಿ ನಿವಾರಿಸಿಬಿಡಬಲ್ಲ ಕ್ರಾಂತಿ ಜರುಗಬೇಕೆಂಬ ಮೋಹನದಾಸ, ಗಾಂಧಿಯಾಶ್ರಮದಲ್ಲಿ ಶಾಂತಿಯ ಪಾಠ ಹೇಳಿಸಿಕೊಂಡ ಅಪ್ಪ ಎಮ್.ಎಲ್.ಎ ಬೆಟ್ಟಯ್ಯ,  ಜಾತಿಯನ್ನು ತಾನಾಗಿ ಬಿಟ್ಟರೂ ಅದು ತನ್ನ ಬಿಡದು ಎಂಬ ಮಾತಿನ ಶ್ರೀನಿವಾಸನ ಅಪ್ಪ ಮಂತ್ರಿಗಳು, ಊರ ಪಾಳೆಗಾರ ಮೇಲಗಿರಿ ಗೌಡ, ಇವರೊಂದಿಗೆ ತನ್ನ ಅಂತಸ್ತಿನಲ್ಲಿ ಯಾವ ಕಮ್ಮಿಯೂ ಇರಬಾರದೆಂಬ ಮನಸ್ಥಿತಿಯ ಸತ್ಯಳ ಅಣ್ಣ ವೆಂಕಟೇಶ, ಮಗಳು ಪರಜಾತಿಯವನನ್ನು ಮದುವೆಯಾಗುತ್ತಾಳೆ ಎಂದು ನೊಂದು ತನ್ನ ಆಜೀವ ಪರ್ಯಂತ ನಡೆಸಿಕೊಂಡು ಬಂದಿದ್ದ ಪೂಜೆ,ಪುನಸ್ಕಾರಗಳಲ್ಲಿ ಕೊನೆಗೆ ದೇವರಲ್ಲಿಯೂ ನಂಬಿಕೆ ಕಳೆದುಕೊಂಡು ಮಾನಸಿಕ ಅಸ್ವಸ್ಥನಾಗಿ ಸಾಯುವ ಅಪ್ಪ ವೆಂಕಟರಮಣಯ್ಯ, ಜಾತಿಯ ಗೋಡೆ ಒಡೆಯುವ ಕ್ರಿಯೆಯಲ್ಲಿ ತಾನೂ ಭಾಗವಾಗಿದ್ದೇನೆಂದು ಭಾವಿಸಿದ ಮಾದಿಗ ಬೆಟ್ಟಯ್ಯನ ಮಗಳು ಮೀರಾಳ ನಿರ್ಭಾಗ್ಯವಂತ ಸಾವು, ಇವೆಲ್ಲಕ್ಕೆ ತಳುಕಿಹಾಕಿಕೊಂಡು ಸಂಪ್ರದಾಯವಾದೀ ಮನಸ್ಥಿತಿಯ ಸಮಾಜ ಹೇಗೆ ಈ ವ್ಯವಸ್ಥೆಯನ್ನು ಪೋಷಿಸುತ್ತಾ ಬಂದಿದೆ ಎಂಬುದರ ಚಿತ್ರಣವನ್ನು ನೀಡುವಲ್ಲಿ ಭೈರಪ್ಪನವರು ಯಶಸ್ವಿಯಾಗಿದ್ದಾರೆ.

ಮತ್ತೆ ಮತ್ತೆ ಅದೇ ಜಾತಿಯ ಬಗೆಗಿನ  ಪಾತ್ರಗಳ ಅಭಿಪ್ರಾಯಗಳು, ಆಯಾ ಜಾತಿಯ ಜಾಗದಿಂದ ಇದರ ಬಗೆಗಿನ ಭಾವನೆಗಳನ್ನು ಬಿಡಿಸಿಹೇಳುವ ಪ್ರಯತ್ನದಲ್ಲಿ ಕಾದಂಬರಿಯ ಗಾತ್ರ ಹೆಚ್ಚಾಗಿಯೂ
ಹೇಳಿದ ವಿಷಯನ್ನೇ ತಿರು ತಿರುಗಿ ಹೇಳುತ್ತಿರುವ ಹಾಗೆಯೂ ಓದುಗನಿಗೆ ಭಾಸವಾಗುತ್ತದೆ‌. ಯಾವುದು ಸರಿ ಯಾವುದು ತಪ್ಪು  ಧರ್ಮ ಕರ್ಮಗಳ ಸಂಕೋಲೆಯಿಂದ ಹೊರಬಂದು ತೊಳಲಾಡುವ ಸತ್ಯ ಶೂದ್ರಳಂತೆ ತೋಟದಲ್ಲಿ ಕೆಲಸ ಮಾಡುವ ಬದುಕನ್ನೂ ಆಯ್ದುಕೊಂಡು ಶುದ್ಧ ಬ್ರಾಹ್ಮಣ ಪುರುಷರಂತೆ ಜನಿವಾರವನ್ನು ಧರಿಸಿ ಹವನಗಳನ್ನು ನಡೆಸುವುದೂ ಜಾತಿ ಭಾವನೆಯನ್ನೇ ಅವೇದ್ಯವಾಗಿಸಿಕೊಂಡು ಆಡುವ ಅಗ್ನಿಗೆ ಅಸ್ಪೃಶ್ಯತೆಯಿಲ್ಲವೆಂಬ ಮಾತು ಒಟ್ಟಿಗೆ ಕೂತು ಮೀರಾಳ ಕೈ ಅಡಿಗೆಯನ್ನೂ ಸೇವಿಸುವ ಅವಳ ಸ್ವಭಾವ ತಲತಲಾಂತರದಿಂದ ಬಂದ ಜಾತಿಯ ಕಂದಕವನ್ನೂ ಪಿತೃಪ್ರಧಾನ ವ್ಯವಸ್ಥೆಯನ್ನೂ ಬೊಟ್ಟುಮಾಡಿ ತೋರಿಸುತ್ತದೆ‌.

ಮಂತ್ರಿಗಳು ಪಕ್ಕಾ ರಾಜಕಾರಣಿಯಂತೆ ಜಾತಿಯನ್ನು ಹೇಗೆ ಬಳಸಿಕೊಳ್ಳಬಹುದೆಂಬುದರಲ್ಲೇ ತಮ್ಮ ಅಭಿಪ್ರಾಯ ಇಟ್ಟುಕೊಂಡವರಂತೆ ರಾಜಕೀಯ ವ್ಯವಸ್ಥೆಯ ಸುತ್ತ ಲೇಖಕರು ಜಾತಿಯ‌ ಗೋಡೆಗಳು ಹೇಗೆ ಬೆಳೆದುಕೊಂಡಿದೆಯೆಂಬುದರ ಚಿತ್ರಣ ನೀಡುತ್ತಾರೆ‌.  ಮಾದಿಗ ಬೆಟ್ಟಯ್ಯನ ಮಗ ಮೋಹನದಾಸ ತಾನು ಶೂದ್ರನೆಂದು ಕೀಳು ಭಾವನೆಯಲ್ಲಿ ನಡೆಸಿಕೊಳ್ಳುವ ಸಮಾಜಕ್ಕೆ, ಬ್ರಾಹ್ಮಣರಿಗೆ ತಕ್ಕ ಪಾಠ ಕಲಿಸುವ ಇರಾದೆಯಲ್ಲಿ ಹೇಗೆ ಯುವಕರನ್ನೂ, ಅವನ ಸಮಾಜದವರನ್ನೂ ಕ್ರಾಂತಿಗೆ ಕರೆಕೊಡುತ್ತಾನೆಯೋ ಹಾಗೇ ಯಾವ ಸಮಾನತೆಗಾಗಿ ಸತ್ಯ ಅಪೇಕ್ಷೆಯಿಟ್ಟಿದ್ದಳೋ ಅದಕ್ಕಿಂತ ಕ್ರಾಂತಿ ಸ್ವಭಾವಿ ಮನಸ್ಥಿತಿಯಲ್ಲಿ ಬ್ರಾಹ್ಮಣ ದ್ವೇಷ ಭಾವವನ್ನೂ ಪಸರಿಸುತ್ತಾನೆ. ಬಹುತೇಕ ಕ್ರಾಂತಿಯಿಂದ ಸಮಾನತೆ ಬಯಸುವವರು ಮುಂದೆ ಶೋಷಣೆಯನ್ನೇ ನಡೆಸುತ್ತಾರೆ ಎಂಬ ಭಾವ ಅವನ ಮಾತುಗಳಿಂದ ವ್ಯಕ್ತವಾಗುವುದನ್ನು ಈ ಕಾಲಘಟ್ಟದಲ್ಲಿ  ಸಮಾನತೆಯ ಅಂಶ ಹೇಗಿರಬೇಕೆಂಬುದರ ಬಗ್ಗೆ ಖಚಿತ ನಿಲುವನನ್ನು ರೂಪಿಸಿಕೊಳ್ಳಲು ಓದುಗರಿಗೆ ಬಿಡುತ್ತಾರೆ. ಮಂದಿರ ಪ್ರವೇಶದ ಘಟನೆಯಲ್ಲಿ ಲೇಖಕರು ಏಕೆ ಮೋಹನದಾಸನು ಮೂರ್ಛೆಹೋಗುವ ಸನ್ನಿವೇಶವನ್ನು ಸೃಷ್ಟಿಸಿದರು ಎಂಬುದು ಲೇಖಕರು ಏನನ್ನು ಹೇಳ ಬಯಸುತ್ತಿದ್ದಾರೆ ಎಂದು ಗೊಂದಲಕ್ಕೀಡು ಮಾಡುತ್ತದೆ. ಅದು ಜಾತಿ ವ್ಯವಸ್ಥೆಯನ್ನು ತೊಡೆದುಹಾಕುವಲ್ಲಿ ಆತನ ಅತ್ಯುನ್ಮಾದದ ಕ್ರಿಯೆಯ ಅಪಾಯವನ್ನು ಪ್ರತಿನಿಧಿಸಿದೆಯೆಂದು ಭಾವಿಸಬೇಕೆ ಅಥವಾ ಹರಿಜನರ ದೇಗುಲ ಪ್ರವೇಶವನ್ನೇ ಧಿಕ್ಕರಿಸುವ ಬ್ರಾಹ್ಮಣೀಯ ಮನಸ್ಥಿತಿಯನ್ನು ಪ್ರತಿನಿಧಿಸುತ್ತದೆಯೇ??

ಮೋಹನದಾಸ ಡೈನಮೈಟುಗಳನ್ನು ಸಿಡಿಸಿ ಆಣೆಕಟ್ಟು ಒಡೆದು ಮಹಾ ಜಲಪ್ರಳಯವನ್ನು ಸೃಷ್ಟಿಸಿದ ಎಂಬ ರೂಪಕವು ಶತ ಶತಮಾನಗಳಿಂದ ನಡೆದುಬಂದ ಅಸಮಾನತೆಯ ಕಟ್ಟುಪಾಡುಗಳನ್ನು ಕ್ರಾಂತಿಯ ಹಾದಿಯಿಂದ ದಾಟಲು ಹಾಕಿದ ಹೆಜ್ಜೆ ಹೇಗೆ ವಿಧ್ವಂಸಕ,ವಿನಾಶಕ ಕೃತ್ಯವೆಸಗುತ್ತದೆ ಎಂಬುದನ್ನು ಭೈರಪ್ಪ
ಸೂಚ್ಯವಾಗಿಸಿದ್ದಾರೆ. ಸತ್ಯ ಇದಕ್ಕೆ ಅವನಿಗೆ ಮಾರ್ಗದರ್ಶಿಯಾಗಿದ್ದರೂ ಅವಳು ಈ ಪೈಶಾಚಿಕ ಮನೋಭಾವವನ್ನು ಎಂದೂ ಒಪ್ಪಿರಲಿಲ್ಲ. ಗುಡಿಯು ನೀರಿನಲ್ಲಿ ಮುಳುಗುತ್ತಿದ್ದಂತೇ ಈ ಜಾತಿಯ ದ್ವೇಷವೂ ಮುಳುಗಿ ಹೊಸ ಸಮಾಜದ ಸೃಷ್ಟಿಯಾಗುವುದೇ ಎಂಬುದನ್ನು ಸತ್ಯ ನೋಡುತ್ತಾ ನೋಡುತ್ತಾ ಬಿಕ್ಕುತ್ತಾಳೆ.. ಸತ್ಯ ಇವೆಲ್ಲವನ್ನೂ ನೋಡಿಯೂ ನೋಡದೇ ಮೌನವಾಗುತ್ತದೆ.

ದಲಿತ ಸಾಹಿತ್ಯದ ಏರುಪ್ರಾಯದ ಅವಧಿಯಲ್ಲಿನ ಈ ಕೃತಿಯ ಮಹತ್ವ ಇದೇ ವಿಧ್ವಂಸಕ ಕೃತ್ಯದ, ಸೇಡಿನ, ದ್ವೇಷದ ಮನೋಭಾವವನ್ನು ಹೊರಗಿಟ್ಟು ಸಮಾನತೆಯನ್ನು ಸಾಧಿಸಬೇಕಾದುದೇ ಹೊರತು ಈ ಪೈಶಾಚಿಕ ನಿಲುವು ಯಾವತ್ತಿಗೂ ವಿನಾಶಕಾರಕವೆಂಬ ಸಂದೇಶವನ್ನು ಕಟ್ಟಿಕೊಡುವಲ್ಲಿ ಲೇಖಕರು
ಸಫಲರಾಗಿದ್ದರೂ ಸಹ ಅಂತರ್ಜಾತೀಯ ಸಂಬಂಧಗಳ ಬಗ್ಗೆ  ನಿಲುವನ್ನು  ಓದುಗನಿಗೇ ಬಿಟ್ಟು ಕೈ ತೊಳೆದುಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ೨೦ನೇ ಶತಮಾನದ ಸಾಮಾಜಿಕ, ಸಾಂಸ್ಕೃತಿಕ ಬದುಕಿನ ಅಧ್ಯಯನಕ್ಕಾಗಿಯಾದರೂ ಓದಬೇಕಾದ ಮಹತ್ವದ ಕೃತಿಗಳ ಸಾಲಿಗೆ ಸೇರುತ್ತದೆ.

"ಜೀವನ ಪ್ರವಾಹವೇ ಇತಿಹಾಸ.ಯಾವೊಂದು ಸಿದ್ಧಾಂತದ ಬೆಳಕಿನಲ್ಲಿ  ಜೀವನವನ್ನು ಅರ್ಥ ಮಾಡಿಕೊಳ್ಳಲು ಹೊರಟರೂ ಅದರ ಆಳ ವೈಶಾಲ್ಯ ಸಂಕೀರ್ಣತೆಗಳು ಸಿಕ್ಕದಂತೆ ಆಗುತ್ತದೆ. ಆದರೆ ಸಿದ್ಧಾಂತಗಳೆಲ್ಲ ಹುಟ್ಟುವುದು ಜೀವನದಿಂದಲೇ. ಜೀವನವೇ ಸತ್ಯದ ಆಧಾರ,ಸಿದ್ಧಾಂತಗಳಲ್ಲ.ಇತಿಹಾಸವೂ ಹಾಗೆಯೇ.ಹೇಗೆ ಸತ್ಯದ ಹೆಸರಿನಲ್ಲಿ ಜೀವನವನ್ನು ವಿಕೃತಗೊಳಿಸಿ ನೋಡಬಾರದೋ , ಹಾಗೇ ಸಿದ್ಧಾಂತಕ್ಕೆ ಪಕ್ಕಾಗಿ ಇತಿಹಾಸವನ್ನು ತಿರುಗಿಸಬಾರದು.
-- ಎಸ್. ಎಲ್. ಭೈರಪ್ಪ"






Monday, 13 April 2020

ಬೆಳ್ದಿಂಗಳ್ ರಾತ್ರೀಲಿ

ಬೆಳ್ದಿಂಗಳ್ ರಾತ್ರೀಲಿ
ಸದ್ದಿಲ್ಲದ್ ಸಪ್ನ್ದಾಗ..
ನನ್ನಾಕಿ ಬತ್ತಾಳೆ ಕಾಣೀ..

ಎದಿ ಮ್ಯಾಲೆ ಹಣೆ ಮಡ್ಗಿ
ಬಿಸ್ಯುಸ್ರ ಹೃದ್ಯಾಗ
ಸಂದೇಸಾ ಕೊಡ್ತಾಳೆ ಕಾಣೀ..

ಈ ಭೂಮಿ ಮಲ್ಗ್ದಾಗ
ನಾವಿಬ್ರೇ ಎಚ್ರಾದಂಗ
ಚಂದ್ಚಂದ ಕನ್ಸ್ ಬಿಟ್ಟೋಗ್ತಾಳ್ ಕಾಣೀ...

ಸುತ್ತಾರು ಊರಲ್ಲಿ
ಗುಲ್ಲೆಬ್ಸಿ ಬಂದಾಳೆ
ಚಾಲೂ ಅದಾಳ್ ನಮ್ ರಾಣಿ...

ನೀ ಅಂದಂಗ್ ಸುಮ್ಕೆ
ನಾಕ್ ದಿವ್ಸ ತೆಪ್ಗೆ
ಬಿದ್ಕಂಡು ಮೈಯಾಗ ಬೇನಿ

ಮಲ್ಲಿಗಿ ತುರ್ಬ
ಮಕ್ರಂದ ಹರ್ಡಿ
ಸಂದಾಕೆ ಇಲ್ಕೇಳು ಜಾಣಿ

ಚಂದಾನ ಮೊಗ್ವೇ
ಸೂರ್ಯಂಗೆ ತೋರ್ಬ್ಯಾಡ
ಮಲ್ಲಿಗಿ ಬಾಡಿತ್ತು ಹೆಣ್ಣೀ..

ವೈಯ್ಯಾರ ನಿಂಗೀಗ
ಬೆಲ್ಲದ ಪಾನಕ
ಮೈಯ್ಯೆಲ್ಲ ಮಡ್ಗಿರು ಕಣ್ಣೇ..

Monday, 23 March 2020

ಸುಟ್ಕತೆಗಳು

೧.ಪ್ರೇಮಕಾಯ
ಆತನದ್ದು ತೀರಾ ಸಹಜ ಸಾವೆಂದು ದಾಖಲೆ ದಸ್ತಾವೇಜು ತಯಾರುಮಾಡಿ ಪ್ರಕರಣ ಮುಗಿಸಲಾಯಿತು.. ಪಾಪ!
ಪ್ರೇಮದ ಸುಳಿಯಲ್ಲಿ ಸಿಲುಕಿ ಉಸಿರುಗಟ್ಟಿದ್ದ
ಅವನಿಗೆ ಆಗ ತಾನೇ ಭೇಟಿಯಾದ ಪ್ರೇಮದ ಹೊಸಾ ಭಾಷೆ ಅರ್ಥವೇ ಆಗಲಿಲ್ಲ. ಹೇಗಾದೀತೇ ಹುಡುಗಿ?? ನೀ ಅವನಿಗೆ ವರ್ಣಮಾಲೆಯ ಪಾಠ ಇನ್ನೂ ಮುಗಿಸಿರಲಿಲ್ಲ. ಬೆರಗಿನಲಿ ಇಳಿಬಿದ್ದ ಹೆರಳತುದಿಯಿಂದ ಜಾರಿ ಆತ್ಮಹತ್ಯೆ ಮಾಡಿಕೊಳ್ಳುವಾಗ ಅವನು ಈಗ ತಾನೇ ಪ್ರೇಮಪಥಿಕನಾಗಿದ್ದ.. ಪ್ರೇಮದ ಹಾದಿ ಹಿಡಿಯುವುದು ಅಷ್ಟು ಸುಲಭದ್ದಲ್ಲ. ತೊರೆಯುವುದೂ ಸಸಾರವೇನಲ್ಲ. ಹೊಸದೊಂದು ಜಗತ್ತಿಗೆ ತೆರೆದುಕೊಳ್ಳುವಾಗ ಹಳೆಯ ಜಗತ್ತು ಮುಚ್ಚಿಕೊಳ್ಳುತ್ತದೆ. ಇವತ್ತಿನ ಜಗತ್ತಿಗೆ ಆತ ಸತ್ತಿದ್ದ. ಶವಪರೀಕ್ಷೆಯ ಫಲಿತಾಂಶವೂ ಆತನ ಸಾವನ್ನು ದೃಢೀಕರಿಸಿತ್ತು. ಹೌದು ಇಂದಿನ ಪ್ರೇಮಕ್ಕೆ ದೇಹವೊಂದಿರಬೇಕು..!  ಆದರೆ ಪ್ರೇಮ ದೇಹಕ್ಕೋ ಆತ್ಮಕ್ಕೋ..! ಕಾಯವಿಲ್ಲದ ಪ್ರೇಮಕ್ಕೆ ಯಾರೋ 'ಭ್ರಮೆ'ಯೆಂದು ಹೆಸರುಕೊಟ್ಟರಂತೆ..!   ಶಾರೀರಿಕ ಪ್ರೇಮದ ಪುರಾವೆ ಒದಗಿಸಲು  ನಕಲು ಸೃಷ್ಟಿಗೇನು ಕೊರತೆಯಿಲ್ಲ. ಆದರೆ ಅಗೋಚರ ಪ್ರೇಮದ ಸಾಕ್ಷಿಗೆ ಭ್ರಮೆಯೆಂಬುದು ಹುಟ್ಟಿಕೊಂಡಿತೇ? ಹಾಗಾದರೆ ಭ್ರಮೆಯೆಂಬುದು ಪ್ರೇಮದ ಸೃಷ್ಟಿಯೇ ಅಥವಾ ಭ್ರಮೆಯ ಸೃಷ್ಟಿ ಪ್ರೇಮವೇ ? ಇವೆರಡರ ಸೃಷ್ಟಿ ಕವಿತೆಯೇ,ಕಾವ್ಯವೇ,ಕಥೆಯೇ ಅಥವಾ ಇನ್ನೇನು? ಹಾಗಾದರೆ ಅವನೀಗ ಬರೀ ದಾಖಲೆಗಳಲ್ಲಿನ ಅವಶೇಷ.ಅವನು ಪ್ರೇಮಿಸಿದ್ದಾದರೂ ಏನನ್ನು? ಪ್ರೇಮಕ್ಕೆ ಕಾಯ ಬೇಕೇ ಆದರೆ ಪ್ರತಿ ಕಾಯದಲ್ಲೂ ಪ್ರೇಮವೊಂದಿರಬೇಕಲ್ಲವೇ..?
      ಅವನೆಂತ ಪಾಪಿ ಪ್ರೇಮವನ್ನೇ ಪ್ರೇಮಿಸಿದವನು ? ಅವನದ್ದು ಸಾವಲ್ಲ;ಹತ್ಯೆ.  ಅಗೋಚರ ಪ್ರೇಮದ ಇರಾದೆಯೇ ಅವನ ಸಾವಿನ ಕರ್ತೃ. ಹಾಗಾದರೆ ಪ್ರೇಮಕ್ಕೆ ಶಿಕ್ಷೆ ವಿಧಿಸಲುಬಹುದೇ? ಬೇರಾವುದೋ ಲೋಕದಿಂದ ಸಾವೆಂಬುದನ್ನು ಪಡೆಯುವುದೇ ಅಥವಾ ಆತ್ಮ ಆ ಲೋಕಕ್ಕೆ ತಲುಪುವುದು ಪ್ರೇಮವೇ ?ಅಥವಾ  ಹೀಗೆ ಪ್ರಶ್ನಿಸುವುದೂ ಪ್ರೇಮವೇ ತಾನೇ ....🤔 ಹಾಗೇ ನೋಡಿದರೆ ಸಾವೆಂಬುದೇ ನಿಗೂಢ. ಅಂತದ್ದರಲ್ಲಿ ಯಾರದ್ದು ತಾನೆ ಸಹಜ ಸಾವು? ಅದಕ್ಕೇ ಸಾವಿಗೊಂದು ಕಾರಣವಿರಬೇಕು. ಅಂದರೆ ನೀವು ಮೊದಲನೇ ಸಾಲಿನಲ್ಲಿನ ತಪ್ಪನ್ನು ಗುರುತಿಸಿಲ್ಲ ಎಂದಾಯಿತು ... 😄😶
                                     
                                 ೨.ಕಿಡ್ನ್ಯಾಪ್

"ಹೆಲ್ಲೋ ಮಿಸ್ಟರ್.!ನಿಮ್ಮ ಮಗ ಸೇಫಾಗಿ ಮನೆಗೆ ತಲುಪಬೇಕಂದ್ರೆ
ಟೂ ಕ್ರೋರ್ ಹಾರ್ಡ್ ಕ್ಯಾಶ್ ಈ ಅಡ್ಡ್ರೆಸ್ಗೆ  ಸಂಜೆ ಒಳಗೆ ತಲುಪಿಸಿ ಅದರ್ ವೈಸ್ ಡೆಡ್ ಬಾಡಿ ನೋಡ್ಬೇಕಾಗತ್ತೆ ಹುಷಾರ್"
... ಟುಂಗ್ ..ಟುಂಗ್.. ಹೆಲ್ಲೋ.. ಹೆಲ್ಲೋ..ಟೂಂಗ್..!
ನಗರದಲ್ಲಿ ಕೋಲಾಹಲ.ಈಗೆರಡು ವರ್ಷಗಳ ಹಿಂದೆ ಏಕಾಏಕಿ ಮಾರುಕಟ್ಟೆಯ ಮೇಲೆ ಅಧಿಪತ್ಯ ಸಾಧಿಸಿದ್ದ ಒಂದು ಆಹಾರೋತ್ಪನ್ನದ ಕಂಪನಿಯ ಮುಖ್ಯಸ್ಥ ನಾಪತ್ತೆಯಾಗಿದ್ದನಂತೆ.
ಪ್ರಮುಖ ಸುದ್ದಿವಾಹಿನಿಗಳಲ್ಲೆಲ್ಲ ಈ ಉದ್ಯಮಿಯದ್ದು ಕಿಡ್ನ್ಯಾಪ್ ಎಂದು ಸುದ್ದಿ ಬಿತ್ತರಗೊಂಡಿತು. ನಾಲ್ಕು ದಿನಗಳ ತದನಂತರದಲ್ಲಿ ಉದ್ಯಮಿ ತಾನಾಗಿಯೇ ವಿದೇಶದಿಂದ ಹಿಂತಿರುಗಿದ. ಯಾರಿಗೂ ಖಬರಿಲ್ಲದೇ ವಿದೇಶ ಪ್ರಯಾಣ ಮಾಡಿದ್ದ ಆತನ ನಾಪತ್ತೆ ಉದ್ಯಮ ಜಗತ್ತಿನಲ್ಲಿ ಕಳವಳಕ್ಕೆ ಎಡೆಮಾಡಿತ್ತು. ಈ ವರ್ಷ ಅವನ ಕಂಪನಿಯ ಉತ್ಪನ್ನ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಬಿಕರಿಯಾಗಿ  ಕಂಪನಿಯ ಷೇರು ಮಾರುಕಟ್ಟೆ ಎತ್ತರಕ್ಕೇರಿತು.  ಆತನ ನಾಪತ್ತೆಯಿಂದಾಗಿ ರಾಜ್ಯಾದ್ಯಂತ ಕಂಪನಿ ಪ್ರಚಾರ ಪಡೆಯಿತು. ನಂತರದಲ್ಲಿ ಸಿಕ್ಕ ಮಾಹಿತಿಯ ಪ್ರಕಾರ ಇದು ಆತನ ಉದ್ದೇಶಪೂರಿತ ಯೋಜನೆಯೆಂಬುದು ತಿಳಿದುಬಂದಿತು. ಇನ್ನೆರಡು ವರ್ಷದ ನಂತರದಲ್ಲಿ ಆತ ಕೊಟ್ಯಾಧಿಪತಿಯಾಗಿ ದೇಶದಲ್ಲಿಯೇ ಸಿರಿವಂತರ ಪಟ್ಟಿಗೆ ಸೇರಿದ.ಮುಂದೊಂದು ದಿನ ಅವನ ಹದಿನಾರು ವಯಸ್ಸಿನ ಮಗ ಅಪಹರಣವಾಗಿದ್ದ‌ನೆಂಬ ಸುದ್ದಿ ಕೇಳಿ ಮಗನನ್ನು ಚಿಕ್ಕಂದಿನಿಂದ ನೋಡುತ್ತಿದ್ದ ಸುತ್ತಮುತ್ತಲಿನವರು ಮಗ ಅಪ್ಪನಿಗಿಂತ ಬುದ್ವಂತ ಎಂದು ಮಾತನಾಡಿಕೊಳ್ಳುತ್ತಿದ್ದರು.

                            ೩.ದೆವ್ವಗಳು ಇದ್ದಾವೆ ನಿಜ!!
                           
ಒಮ್ಮೆ  ರಾತ್ರಿಯ ೧೧ ಗಂಟೆಯ ಸಮಯದಲ್ಲಿ ತುಂಬಾ ದೂರ ಕಾರು ಚಲಾಯಿಸಿ ಬಳಲಿದ್ದರಿಂದ ಹೈವೇ ಪಕ್ಕದ ಡಾಭಾವೊಂದನ್ನು ಹೊಕ್ಕಿದೆ.ಆತುರದಲ್ಲಿದ್ದ ಕಾರಣ ಡಾಭಾದ ಹೆಸರು ನೋಡಲು ಮರೆತಿತ್ತು. ಶುದ್ಧ ಶಾಖಾಹಾರಿಯಾದ ನನಗೆ ಒಳಗೆ ಬಂದು ಕುಳಿತಾದ ಮೇಲೆ ನೆನಾಪಾಯಿತು. ಸುತ್ತ ಯಾರಾದರೂ ಗಿರಾಕಿಗಳು ಆಹಾರ ಸೇವಿಸುತ್ತಿದ್ದರೆ ಕಣ್ಣಾಯಿಸಿದರೆ ಅಂದಾಜಾಗುತ್ತದೆಯೆಂದು ನೋಡಿದೆ. ದುರದೃಷ್ಟಕ್ಕೆ ಒಬ್ಬ ನರಪಿಳ್ಳೆಯೂ ಇರಲಿಲ್ಲ. ಟೇಬಲ್ಲಿಗೆ ಆತುಕೊಂಡಿದ್ದ ಕುರ್ಚಿಯೊಂದನ್ನು ಸರಿಸುತ್ತಾ ಕುಳಿತೆ. ಡಾಭಾದ ಆ ರಾತ್ರಿಯಲ್ಲಿ ಸ್ವಲ್ಪವೇ ಬೆಳಕಿನಲ್ಲಿ ಏಕಾಏಕಿ ಒಬ್ಬ ಮಾಣಿ ಬಂದು 'ಏನ್ ಕೊಡ್ಲಿ ಸಾರ್?' ಎಂದು ಕೇಳಿದ.. ಕಸಿವಿಸಿಯಿಂದ ಕೇಳಿದೆ 'ವೆಜ್ ಓನ್ಲಿ ಅಲ್ವಾ ?'ಅಂತ . ಅವನು ಒಂದು ವಿಧವಾದ ರೀತಿಯಲ್ಲಿ ನನ್ನನ್ನು ದಿಟ್ಟಿಸುತ್ತಾ ಹೌದು ಸಾರ್ ಎಂದು ತಲೆಯಲ್ಲಾಡಿಸಿದ. ಏನೇನಿದೆ ಎಂದು ಕೇಳುವುದರಲ್ಲಿದ್ದೆ ಅಷ್ಟರಲ್ಲಿ ಸಡನ್ ಲೈಟ್ ಆಫಾಯಿತು.!  ನಾಲ್ಕೂ ದಿಕ್ಕುಗಳಿಂದಲೂ ಕತ್ತಲು ಒಂದೇ ಸಮನೆ ಆವರಿಸಿತು.ಜೊತೆಗೆ ಭಯವೂ ಕೂಡಾ..ಸಣ್ಣದಾಗಿ ಕಿರುಚುವುದರಲ್ಲಿದ್ದೆ..  ಅಷ್ಟರಲ್ಲಿ ಮಾಣಿ ಆವರಿಸಿದ ಮೌನ ಮುರಿದಂತೆ ಹೆದರಬೇಡಿ ಸಾರ್ ಈಗ ಕ್ಯಾಂಡಲ್ ತಂದೆ ಇರಿ.. ಯಾವ ದೆವ್ವವೂ ಬರಲ್ಲ ಕೂತ್ಕೊಳಿ ಅಂದ.. ಇದೇನು ನನ್ನತ್ರ ದೆವ್ವ ಅಂತ ಹೇಳ್ತಾನಲ್ಲ  ಎಂದು ನನಗೆ ನಾ‌ನೇ ಸಮಾಧಾನಪಟ್ಟುಕೊಂಡೆ.  ಐದು ನಿಮಿಷವಾದರೂ ಮಾಣಿಯ ಪತ್ತೆಯೇ ಇಲ್ಲ.ಕರೆಂಟೂ ಹೋದದ್ದು ಬರುವ ಹಾಗೆ ಕಾಣುತ್ತಿಲ್ಲ. ಸಣ್ಣದಾಗಿ ಮಿಂಚೊಂದಿಗೆ ಮಳೆ ಹನಿಯಲು ಶುರುವಿಟ್ಟಿತು. ಮತ್ತೆ ನನಗೆ ಗಾಬರಿಯಾಗಿ ಎದ್ದು ಹೊರಟುಬಿಡೋಣ ಅಂದುಕೊಂಡು ಅಲ್ಲಿಂದ ಎದ್ದು ಬಂದರೆ ಹೊರಗೆ ನಿಲ್ಲಿಸಿದ್ದ ಕಾರು ಇರಲಿಲ್ಲ. ಅಯ್ಯೋ ಶಿವನೆ ಎಂದೆ. ಕಾರನ್ನು ಕದ್ದು ಮಾಣಿ ಪರಾರಿಯಾದ ಎಂದಂದುಕೊಳ್ಳವಷ್ಟರಲ್ಲಿ ಹಿಂದೆ ತಿರುಗಿ ನೋಡಿದರೆ ಅಲ್ಲೀ ಢಾಬಾವೇ ಇರಲಿಲ್ಲ.. ! ತಲೆ ಮೇಲೆ  ಬೆರಳಿಟ್ಟು ನೆನಪಿಸಿಕೊಂಡೆ..
ನನ್ನ ಬಳಿ ಕಾರೂ ಇರಲಿಲ್ಲ. ನನಗೆ ಕಾರು ಚಲಾಯಿಸಲೂ ಬರುವುದಿಲ್ಲ ಎಂದು ಅರಿವಾಗುವುದೊರಳಗೆ ಚಾಕ್ಪೀಸ್ ಒಂದು ಹಣೆ ಮೇಲೆ ಬಡಿದಿತ್ತು ಹಾಗೂ ನನ್ನನ್ನೇ ದುರುಗುಟ್ಟು ನೋಡುತ್ತಿದ್ದ ಮೆತಮೆಟಿಕ್ಸ್ ಲೆಕ್ಚರಮ್ಮನ ಎರಡೂ ಕಣ್ಣು ಗುಡ್ಡೆಗಗಳೂ ಮುಖದಿಂತ ಹೊರಬಂದಿರುವಂತೆ ಕಂಡಿತು ಹಾಗೂ ಮೊದಲ ಬಾರಿಗೆ ದೆವ್ವಗಳು ನಿಜವಾಗಿಯೂ ಇರಬಹುದು ಎಂದನಿಸಿತು.
                                       
          ‌‌    ‌‌                     ೪.ನ್ಯೂಟನ್
         
      ಒಂದು ದಿನ ಹೀಗೇ ನನ್ನ  ಗೆಳೆಯನೊಂದಿಗೆ ಸಹಜ ಮಾತುಕತೆ ನಡೆಯುತ್ತಿತ್ತು. ಮಾತಿನ ಮಧ್ಯೆ ಏನೋ ವಿಷಯವಾಗಿ ನಾನವನಿಗೆ  ಹೇಳಿದೆ. 'ಮಾತಿನಲ್ಲಿನ ವಿಷಯ ಮುಖ್ಯವೇ ಹೊರತು ಆಡುವ ಭಾಷೆಯೋ,ವ್ಯಕ್ತಿಯೋ,ಅಥವಾ ಇನ್ಯಾವುದೋ ಅಲ್ಲ' . ಇದಕ್ಕಾತ ಯಾವುದೇ ಪೂರ್ವಾಪರಗಳಿಲ್ಲದೆ ಯಾವುದೇ ವಿಷಯವನ್ನೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾ ಅವನ ವಾದ ಮಂಡಿಸುತ್ತಿದ್ದ. ಇದಕ್ಕೇ ನಾನವನಿಗೊಂದು ಕತೆ ಹೇಳಿದೆ.
         ' ಒಮ್ಮೆ ಒಬ್ಬ ಹುಡುಗನಿಗೆ(ನನಗೇ ಅಂತಿಟ್ಟುಕೊಳ್ಳಿ) ನ್ಯೂಟನ್ ಕನಸಿನಲ್ಲಿ ಬಂದಿದ್ದನಂತೆ. ಅವನನ್ನು ಆ ಹುಡುಗ ಕೇಳಿದ 'ನೀನು ನಿಜವಾಗಿಯೂ ಸೇಬು ತಲೆಯ ಮೇಲೆ ಬಿದ್ದಾಗ ಗ್ರಾವಿಟಿಯ ಬಗ್ಗೆ ಸಂಶೋಧನೆ ಮಾಡಿದ್ದು ಹೌದಾ? ಎಂದು. ಅದಕ್ಕೆ ನ್ಯೂಟನ್ ನಾನು ಸಂಶೋಧನೆ ಮಾಡುತ್ತಾನೇ ಇದ್ದೆ ಆದ್ರೆ ಸೇಬು ತಲೆ ಮೇಲೆ ಬಿದ್ದಾಗ ನನಗೆ ಗುರುತ್ವದ ಅಸ್ತಿತ್ವ ಗೊತ್ತಾಯ್ತು ಅಂದ್ನಂತೆ.. ಆಗ ಆ ಹುಡುಗ 'ನಿನ್ನ ಹಾಗೇ ನಾನೂ ಸಂಶೋಧನೆ ಮಾಡ್ಬೇಕು ಅಂದ್ರೆ ಸೇಬು ತಲೆ ಮೇಲೆ ಬೀಳ್ಸ್ಕೊಳ್ಬೇಕಾ?'  ಅಂತ ಕೇಳಿದ.
ಅದಕ್ಕಾತ 'ಇಲ್ಲಾ! ನಾನು ಹೇಗೆ ಸಂಶೋಧನೆ ಮಾಡ್ದೆ ಅನ್ನೋದಕ್ಕಿಂತ
ಏನನ್ನು ಸಂಶೋಧನೆ ಮಾಡ್ದೆ ಅನ್ನುವುದರ ಬಗ್ಗೆ ಸ್ಟಡಿ ಮಾಡು' ಅಂತ ಹೇಳಿ ಹೋದನಂತೆ.  ಅದಕ್ಕೆ ಹೇಳೋದು ವಿಷಯ ಮುಖ್ಯ ಅದರ ಹಿನ್ನೆಲೆ ಅಲ್ಲವೆಂದು ನನ್ನ ಗೆಳೆಯನಿಗೆ ಹೇಳಿದೆ.
ಅವನಿಗೆ ಅರ್ಥ ಆಯಿತೋ ಇಲ್ಲವೋ ಗೊತ್ತಿಲ್ಲ ಆದರೆ ಅದಕ್ಕವನು ತಲೆಯಲ್ಲಾಡಿಸಿ ಕೇಳಿದ.. 'ನಿಜವಾಗ್ಲೂ ನ್ಯೂಟನ್ ಕನಸಿನಲ್ಲಿ ಬಂದಿದ್ನಾ ?' ಇದಕ್ಕೆ ನನ್ನ ನಾಲಿಗೆ ಹೊರಳದಂತಾಯಿತು.


                                 ೫.ಗರ್ವಭಂಗ
                                     
       ಮೈ ಉಜ್ಜುವ ಸಾಬೂನಿಗೆ ತನ್ನ ಘಮಿಸುವ ಸೌಗಂಧದ ಬಗ್ಗೆ ಚೂರು ಗರ್ವ.ಒಮ್ಮೆ ಅದಕ್ಕೆ ಬಚ್ಚಲಿನಲ್ಲಿ ತನ್ನದೇ ಸಾರ್ವಭೌಮತ್ವ ಸಾಧಿಸುವ ಯೋಚನೆ ಬಂದು ಬಟ್ಟೆ ಸಾಬೂನಿಗೆ  'ನಿನಗೇನು ಒಂಚೂರೂ ಸುವಾಸನೆ ಅನ್ನೋದೇ ಇಲ್ಲ. ಅದೇನು ಕೆಟ್ಟ ವಾಸನೆ.ಮನುಷ್ಯರು ಧರಿಸಿದ ಕೊಳಕು ಬಟ್ಟೆಯ ಮೇಲೆಲ್ಲ ಓಡಾಡಬೇಕು.ಒಂದು ವಾರದ ದುರ್ನಾತವನ್ನೆಲ್ಲ ನೀನು ನುಂಗಬೇಕು ಅಸಹ್ಯ.ನಾನಾದರೆ ನೋಡು ದಿನವೂ ಸ್ನಾನ ಮಾಡಿಸಿ ಮನುಷ್ಯರನ್ನು ಶುದ್ಧವಾಗಿಸಿಡುತ್ತೇನೆ.ಅವರ ಅಂಗಾಗಳ ಮೇಲೆಲ್ಲ ಓಡಾಡುವ ಅದೃಷ್ಟ' ಎನ್ನುತ್ತಾ ನಾಚಿಕೊಂಡಿತು. ಬಟ್ಟೆ ಸೋಪು ಏನೂ  ಹೇಳದೆ ನಕ್ಕು ಸುಮ್ಮನಾಯಿತು. ಸ್ನಾ‌ನ ಮಾಡಲು ಬಂದ ಸೋಪಿನ ಹಕ್ಕುದಾರ ಮನುಷ್ಯ ಮೈ ಸೋಪಿನಿಂದ ಮೈ ಉಜ್ಜಿಕೊಂಡು ಒಳ್ಳೆ ಸುವಾಸನೆ ಇದೆ ಎಂದು ಹೇಳಿದಾಗ ಮೈ ಸೋಪು ಅಲ್ಲೆ ಪಕ್ಕದಲ್ಲಿ ಒಗೆದು ಒಗೆದು ಸವಕಲಾಗಿ ಸಣ್ಣಗಾಗಿದ್ದ ಇನ್ನೇನು ಮುಗಿಯಿತೆನ್ನುವ ಆಯಸ್ಸಿನ ಬಟ್ಟೆ ಸೋಪಿನೆಡೆಗೆ ನೋಡುತ್ತಾ ಒಳಗೊಳಗೆ ನಗುತ್ತಿತ್ತು.
ಸ್ನಾನ ಮುಗಿಸಿ ಆತ ತನ್ನ ಒಳವಸ್ತ್ರವನ್ನು  ಕಳಚಿ  ಬಟ್ಟೆ ಸೋಪು ನೋಡಿದಾಗ ಅದು ಇನ್ನು ಮುಗಿಯಿತು ಕೈಗೆ ಸಿಗದಷ್ಟು ಸಣ್ಣಗಾಗಿದೆಯೆನ್ನುತ್ತಾ  ಒಳ್ಳೆ ಘಮಗುಡುವ  ಮೈ ಸೋಪನ್ನೆ ತನ್ನ ಒಳಚಡ್ಡಿಯ ಮೇಲೆಲ್ಲ ಹಚ್ಚಿದಾಗ ಮೈ ಸೋಪು ಮೂಗು ಬಾಯಿ ಎಲ್ಲ ಮುಚ್ಚಿಕೊಂಡು ತನ್ನನ್ನೇ ನಿರ್ಭಾವುಕನಾಗಿ ನೋಡುತ್ತಿದ್ದ ಬಟ್ಟೆ ಸೋಪಿನ ಕಡೆ ತಿರುಗಿ ತನ್ನ ಕರುಣಾಜನಕ ಸ್ಥಿತಿಯನ್ನು ತೋಡಿಕೊಳ್ಳುತ್ತಿತ್ತು. 

Tuesday, 17 March 2020

ಹುಡುಕಾ(ಗಾ)ಟ

ಪಿಸುಗುಟ್ಟು ಕೇಳುತ್ತಿದ್ದ ಸಂದೇಹಗಳನ್ನೆಲ್ಲ ನೆನೆಸಿಕೊಂಡು ಮೆಲುಕು ಹಾಕುತ್ತ ಕುಳಿತು ವರ್ಷ ಕಳೆಯುತ್ತ ಬಂತು. ಇಂದಿಗೂ  ನೀನು ಬಿಟ್ಟುಹೋದ  ಅಪೂರ್ಣ ಪ್ರಶ್ನಾವಳಿಗಳಿಗೆ ಉತ್ತರ ಹುಡುಕುತ್ತಲೇ ಇದ್ದೇನೆ. ಬೇಕಾದರೆ ಎದೆಗೂಡ ಮೇಲೆ ಕಿವಿ ಇಟ್ಟು ಕೇಳುವಿಯಂತೆ.. ಪ್ರಶ್ನೆಗಳು ಜೋರಾಗಿಯೇ ಡವಡವಿಸುತ್ತಿರುವ ದನಿ ಕೇಳಬಹುದು.
  ನಸುಕು ಹರಿಯುವುದರ ಯಾವ ಪರಿವೆಯೂ ಇಲ್ಲದಂತೆ ಹನ್ನೊಂದರ ತನಕ ಬಿದ್ದಿರುತ್ತಿದ್ದ ನನಗೆ ಅಂದೇನಾಯಿತು ಗೊತ್ತಿಲ್ಲ.
ಹಠಾತ್ತನೇ ಕತ್ತಲು ಆರುವುದರೊಳಗೇ ಎಚ್ಚರವಾಗಿ ಸದ್ದಿಲ್ಲದೇ
ಕದ ತೆಗೆದು ಮನೆಯ ಅಂಗಳ ದಾಟಿ ಹಾದಿ ಹಿಡಿದಿದ್ದೆ.
ಯಾವತ್ತೂ ಇಲ್ಲದ ಉಮೇದಿಯಲ್ಲಿ  ಓಡುತ್ತಾ ಊರ ದೇಗುಲದ ದ್ವಾರದ ಮುಂದೆ ನಿಂತು ಏದುಸಿರು ಬಿಡುತ್ತಿದ್ದೆ.
ರವಿ ಮಾಮ ಕೇಕೆ ಹಾಕುತ್ತಾ ಬೆಳಗು ಮಾಡುವ ಸದ್ದು ಭಟ್ಟರು ಅಭಿಷೇಕಕ್ಕೆ ಬಿಂದಿಗೆ ಗಡಗಡೆಯಿಂದ ಇಳಿಸುವ ಸದ್ದಿನೊಂದಿಗೆ ಕಲಸಿಹೋಗುತ್ತಿತ್ತು. ತಾಳಮೇಳಗಳಿಲ್ಲದ ದಿನಚರಿಯೊಂದಕ್ಕೆ ನಾಂದಿಯಾಗುವ ಸಂಭ್ರಮದಲ್ಲಿ ದೇಗುಲದ ಹಣತೆಯೊಂದು ಜೋರಾಗಿ ಉರಿಯುತ್ತಲಿತ್ತು.
    ಗಂಟೆ ಬಾರಿಸಿ ಕರಮುಗಿದು ಪ್ರದಕ್ಷಿಣೆ ಹಾಕಿ ಒಂದೆರಡು ನಿಮಿಷ ಧ್ಯಾನಿಸುತ್ತ ಕುಳಿತೆ‌. ಆಗಷ್ಟೇ ಬೆಳಗುಜಾವದ ಚಿಲಿಪಿಲಿಯ ಹಾಡು ಸುರುವಾಯಿತು.. ಕೌಸಲ್ಯ ಸುಪ್ರಜಾ ರಾಮಾ  ಪೂರ್ವಾ ಸಂಧ್ಯಾ ಪ್ರವರ್ತತೇ....
   
    ಪ್ರಶ್ನೆ ಬೆಳಗಿನಲ್ಲೇ ಹುಟ್ಟಿದೆಯೆಂದರೆ ಇಂದೇನೋ ವಿಶೇಷವೋ ಅಥವಾ ವಿಚಿತ್ರವೋ ಕಾದಿದೆಯೆನ್ನುವುದು ಪಕ್ಕಾ. ಧ್ಯಾನ ನಿರತನಾಗ ಪರ್ಯತ್ನದಲ್ಲಿದ್ದವನಿಗೆ ಮನಸ್ಸನ್ನು ಕೇಂದ್ರೀಕರಿಸಲಶಕ್ತನಾಗಿ ಸಂಶಯ,ಸಂದೇಹಗಳ ಜಡಿಮಳೆ ಸುರಿದಂತಾಗಿ ಎದ್ದು ಹೊರಬಂದೆ. ಅಂಥ ತಲೆಕೆಳಗಾಗಿಸುವ ಯೋಚನೆಗಳು ಹುಟ್ಟಿದ್ದೆಲ್ಲಿಂದ,ಪ್ರಶ್ನೆಗಳು ಮೂಡಿದ್ದೆಲ್ಲಿಂದ ಮತ್ತು ಅದಕ್ಕೊಂದಷ್ಟು‌ ಸಿದ್ಧ ಉತ್ತರಗಳಿಗಾಗಿ ತಡಕಾಡುವ ಗೋಜು ಅಂಟಿಕೊಂಡದ್ದೆಲ್ಲಿಂದ??

     ನಿಜವಾಗಿಯೂ ಆತ ಮೂರ್ತನಾಗಿರದಿದ್ದರೆ ಇಂದಿಗೆ ಇಂಥ ಪ್ರಶ್ನಾವಳಿಗಳೆಲ್ಲ ಅರ್ಥ ಕಳೆದುಕೊಂಡಿರುತ್ತಿದ್ದುವು. ಸಾದ್ಯವಾದಷ್ಟು ಅವನು ನಮ್ಮಿಂದ ಅಂತರ ಕಾಯ್ದುಕೊಳ್ಳುವುದು ಬದುಕಿನ ಅಲೆಮಾರಿ ಪ್ರಸಂಗಗಳಿಗೆ ತುಸು ರೋಚಕತೆಯನ್ನಿಡುವುದಕ್ಕೇ ಇರಬೇಕು. ಹುಡುಕಿ ಹೊರಟರೆ ದೇವರೇ ಸಿಗ್ತಾನಂತೆ ಅಂತ ಕನವರಿಸುತ್ತ ಎದ್ದು ಬಂದ ಘಳಿಗೆ ಇವೆಲ್ಲದರ ಜ್ಞಾನೋದಯವಾಗದಿದ್ದದ್ದಕ್ಕೂ ಹಲವು ಕಾರಣಗಳಿರಬಹುದು.
ತಾನಾಯಿತು ತನ್ನ ಪಾಡಾಯಿತು ಎಂದು ದಿನದೂಡುವ ಮಾಮೂಲಿ
ಕ್ರಿಯಾವಳಿಗಳಿಗಿಂತ ಇಂದು ಏನದೋ ವಿಭಿನ್ನವಾದದ್ದನ್ನು ಹುಡುಕುವ,ನಡೆಸುವ ಹೊಸ ಕ್ಷಣಗಳು ಸೂರ್ಯಪ್ರಭೆಯೊಂದಿಗೆ ಪೂರ್ವದ ತಪ್ಪಲಿನಿಂದ ನುಸುಳಿ ಬರತೊಡಗಿದ್ದವು.

ಧರ್ಮವನ್ನು,ದೇವರನ್ನು ಪ್ರಶ್ನಿಸಿ ಸವಾಲೊಡ್ಡುವ
ಕ್ರಿಯೆಯಲ್ಲಿ ಸಣ್ಣ ಅಚಾತುರ್ಯವಾದರೂ ಅದು ಮತ್ತೆ ಎದ್ದೇಳದಂತೆ ಘಾಸಿಗೊಳಿಸಿಬಿಡುತ್ತದೆ. ಹಾಗೆಂದು ಅದೇ ಪ್ರಶ್ನೆಗಳು ಏಕಾಂತದಲ್ಲಿ ಎಲ್ಲರಿಗೂ ಬಂದಿರಲೂಬಹುದು. ಆದರೆ ನಂಬಿಕೆಯ ಜೊತೆಗಿನ ಆಟದಲ್ಲಿ ಕೈ ಸುಟ್ಟುಕೊಳ್ಳುವ ಉಸಾಬರಿ ನನಗೆ ಬೇಡವೆಂದು ಬಿಟ್ಟದ್ದೇ ಹೆಚ್ಚು. ತಾಪತ್ರಯ ಯಾರಿಗಿಲ್ಲ ಹೇಳಿ.?
ಎಲ್ಲದಕ್ಕೂ ಶನೇಶ್ವರನೇ ಹೊಣೆ ಎನ್ನುತ್ತಾ ದೇವರ ಆಟ ಬಲ್ಲವರಾರು ? ಎಂದು ಹಾಡಿಕೊಳ್ಳುತ್ತಾ ಕಾಲ ಕಳೆಯುವುದಕ್ಕಿಂತ
ದೇವರನ್ನು ಹುಡುಕುತ್ತಾ,ಕಾಯುತ್ತಾ,ಅಲೆಯುತ್ತ,ಪ್ರಶ್ನಿಸುತ್ತ, ಉತ್ತರಿಸುತ್ತ ಕಾರ್ಯಾನುರಕ್ತನಾಗಿರುವುದು ಎಷ್ಟೋ ಮಿಗಿಲೆಂದೆನಿಸಿತು. ಅಂದು ಆದದ್ದೂ ಅದೇ ಇರಬಹುದು‌.
ಗುಡಿಯೊಳಗೆ ದೇವರಿದ್ದಾನೋ ಇಲ್ಲವೋ.. ದೇವರ ಸೃಷ್ಟಿ ಈ ಜಗತ್ತೆಂದು ಹೇಳುತ್ತಲೇ ಮನುಷ್ಯ ದೇವರನ್ನು ಸೃಷ್ಟಿಸಿದನೋ ಅಥವಾ‌  ಬರೀ ಕಲ್ಪನೆಗಳ ಆಚರಣೆಗಳೊಂದಿಗೆ‌‌ ನಂಬಿಕೆಗಳು ಸೃಷ್ಟಿಯಾದುವೋ..?
ಹೀಗೇ ಜಟಿಲ ಪ್ರಶ್ನಾವಳಿಗಳು ನಿರಂತರವಾಗಿ ಬಾಧಿಸುತ್ತಿದ್ದುವು.

ದೇಗುಲದಿಂದ ಎದ್ದು ಬಂದವನಿಗೆ ಮನಸ್ಸು ಏನನ್ನೂ ಮಾಡಲು ಹುರುಪು ನೀಡದಂತಾಗಿತ್ತು. ಸೀದಾ ಸಮೀಪದಲ್ಲೇ ಇದ್ದ ಹೊಳೆಯೊಂದರ ಬಳಿ ಹೋಗಿ ದಂಡೆಯ ಮೇಲೆ‌ ಭದ್ರವಾಗಿ ನೆಲೆನಿಂತಿದ್ದ ಕಲ್ಲುಬಂಡೆಯ ಮೇಲೇರಿ ಕುಳಿತು ಸ್ವಚ್ಛಂದವಾಗಿ ಹರಿಯುತ್ತಿದ್ದ ನೀರನ್ನೇ ತದೇಕಚಿತ್ತದಿಂದ ನೋಡುತ್ತಾ ಕುಳಿತೆ.
ಆಳದಲ್ಲಿ‌ ಪುಟ್ಟಪುಟ್ಟ ಮೀನುಗಳು,ಕಪ್ಪೆಗಳು,ನೀರ ಹುಳಗಳು ಬೆಳಗಿನ ಆಹ್ಲಾದವನ್ನು ಆಕಡೆಯಿಂದ ಈ ಕಡೆಗೆ ಅಡ್ಡಾಡುತ್ತ ತಮ್ಮ ಕಾರ್ಯಾಲಾಪಗಳಲ್ಲಿ ತೊಡಗಿಕೊಂಡು ಅನುಭಾವಿಸುತ್ತಿದ್ದುವು.
ಪ್ರಶಾಂತ ಹಸಿರು ವಾತಾವರಣದ ಸ್ವಚ್ಛಂದ ಗಿಡಮರಗಳು, ಗದ್ದೆಯ ವಿಶಾಲ ಬಯಲಲ್ಲಿ ಏಕತಾನತೆಯಿಂದ ಬೆಳೆದಿದ್ದ ಭತ್ತದ ಪೈರುಗಳು,
ಸುಯ್ಯನೆ ಬೀಸುವ ಗಾಳಿಗೆ ವಾಲಾಡುವ ಎತ್ತೆತ್ತರದ ಅಡಿಕೆ, ತೆಂಗಿನ‌ಮರಗಳ ಆ ನಾಟ್ಯ ಅಂದು ರಮಣೀಯವೆನಿಸಲು ಕಾರಣಗಳಿದ್ದಿರಬಹುದು. ಉಯ್ಯಾಲೆಯಾಡುತ್ತಿದ್ದ ಮನಸ್ಸು ಈಗ ಕೊಂಚ ಹದಕ್ಕೆ ಬರುತ್ತಿದ್ದದ್ದು ಗ್ರಾಸವಾಗುತ್ತಿತ್ತು. ಈ ಭೂಮಿಯ ಅಪ್ಯಾಯಮಾನವಾದ ಸೃಷ್ಟಿಗೆ, ಜೀವಜಂತುಗಳ ಬದುಕಿಗೆಲ್ಲ ನೆಲೆ ಕಲ್ಪಸಿ ;ಚರಾಚರಗಳ ಅಸ್ತಿತ್ವಕ್ಕೆ‌ ಹೋರಾಟದ ಪಂದ್ಯವೊಂದನ್ನು ನೀಡಿ ಸೋಜಿಗವನ್ನು ನೋಡುವ ಶಕ್ತಿಯೊಂದಿರಲೇಬೇಕು ಎಂದನಿಸಿತು. ಅದೇ ಆ ಶಕ್ತಿ ದೇವರೆಂದು ಕರೆದಿರಬಹುದು. ಅಲ್ಲವಾದಲ್ಲಿ‌ ಅಲ್ಲಲ್ಲಿ ಘಟಿಸಿದ,ಕೇಳಿದ,ನೋಡಿದ ಪವಾಡಸದೃಶ ಘಟನೆಗಳಿಗೆಲ್ಲ ತಾರ್ಕಿಕವಾದ ಕಾರಣಗಳ್ಯಾವುದೂ ಸಿಗದಿದ್ದರ ಉದಾಹರಣೆಗಳು ಎಷ್ಟು ಬೇಕು??

ಸುಮ್ಮನೆ ಕುಳಿತವನಿಗೆ ಶಾಂತವಾದ ನೀರು ಕದಡುವ ಕೆಲಸ ಸಿಕ್ಕಿತು. ಒಂದು  ಕಲ್ಲನ್ನು ಎತ್ತಿ ಆ ಹೊಳೆಯ ನೀರಿಗೆ ಎಸೆದೆ. ಅಷ್ಟೇ.. ನೀರು ಕದಡಿದ ರಭಸಕ್ಕೆ ಮೀನುಮರಿಗಳು,ಕಪ್ಪೆ-ಹುಳುಗಳೆಲ್ಲ ದೂರಸರಿದುವು. ಕೆಳಗಿದ್ದ ಮಣ್ಣು ಕದಡಿ ಸ್ವಲ್ಪ ನೀರು ಕೆಂಬಣ್ಣಕ್ಕೆ ತಿರುಗಿತು. ಮತ್ತೆ ಸ್ವಲ್ಪ ಹೊತ್ತಿಗೆ  ಶಾಂತವಾಗಿ‌ ನೀರು ತಿಳಿಯಾಗುತ್ತ ಸಹಜತೆಗೆ ಮರಳಿತು. ನೀ ಕೇಳಿದ ಹಳೆಯ ಪ್ರಶ್ನೆಗಳು ಈಗ ಚಿರಂತನವಾಗಿ ಕಾಡುವುದಿದೆ.. ನಡುರಾತ್ರಿ ಎದ್ದು ಯೋಚಿಸುವ ಖಯಾಲಿಯನ್ನು ಈಗ ಕಮ್ಮಿ ಮಾಡಿದ್ದೇನೆ. ದುಗುಡಗಳು ಕ್ಷೋಭೆಗೆ,ವಿಪ್ಲವಕ್ಕೆ ದಾರಿ ಮಾಡಿಕೊಟ್ಟಿತು ಎಂಬ ಕಾರಣಕ್ಕೆ ಆಡಿಸಿದಾತ ಬೇಸರಮೂಡಿ ಆಟ ಮುಗಿಸಿದ... ಎಂದು ಗುನುಗುತ್ತಾ ಸುಮ್ಮನಾಗುತ್ತೇನೆ.

ಸದ್ಯದ ಬರ್ಯಾಣ

DEJA-VU

ಕಾನೂರಿನಲ್ಲಿ ಇಂತಾ ಫಟಿಂಗರ ಸಂಖ್ಯೆ ತುಂಬಾ ಏನಿಲ್ಲ‌. ವೆಂಕಣ್ಣ ಅಂತ ಮಹಾಫಟಿಂಗರ ಸಾಲಿಗಂತೂ ಸೇರಿಸೋದಕ್ಕೆ ಲಾಯಕ್ಕಿಲ್ಲ. ಅವನ ಕರಾಮತ್ತು ಹೇಳಿಕೊಳ್ಳುವಂತ ಘನಾಂದಾರಿದು ಅ...

ಟಾಪ್ ಓದಾಣ